ಮಳೆಯ ಹನಿಯೊಂದಿಗೆ ಬೆವರನ್ನು ಸೇರಿಸಿ ಬೆಳೆ ತೆಗೆವ ರೈತ ತನ್ನ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಆಗುತ್ತಲೇ ಇಲ್ಲ. ಬೆಳೆದ ಉತ್ಪನ್ನವನ್ನು ಅಪಾರ ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಹಾಕಿದರೂ ಅದಕ್ಕೆ ತಕ್ಕ ದರ ಸಿಗದೆ ಶ್ರಮ ಹಾಳಾಗುತ್ತಿದೆ. ಇದರಿಂದ, ಬೇಸತ್ತು ತನ್ನ ಜೀವನವನ್ನೇ ಬಲಿ ಕೊಡುತ್ತಿರುವುದು ದುರಂತ.
ಮ್ಯಾಗಿ, ಫಿಜ್ಜಾ, ಬರ್ಗರ್ಗಳಿಗೆ ಇರುವ ಬೇಡಿಕೆ, ರೈತ ಬೆಳೆದ ತಾಜಾ ಹಣ್ಣು, ತರಕಾರಿ ಹಾಗೂ ದವಸ ಧಾನ್ಯಗಳಿಗೆ ಇಲ್ಲ. ಬೇಡಿಕೆ ಇದ್ದರೂ, ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ಹೆಚ್ಚಿನ ದರಕ್ಕೆ ಇವು ಮಾರಾಟವಾದರೂ ಅದರ ಲಾಭ ರೈತನಿಗೆ ಸಿಗುತ್ತಿಲ್ಲ. ಕೃಷಿಯನ್ನು ಹೀಗೇ ಕಡೆಗಣಿಸಿದರೆ ಮುಂದೆ ನಾವು ಆರೋಗ್ಯಕ್ಕೆ ಮಾರಕವಾದ ತಿನಿಸು, ಪಾನೀಯಗಳಿಗೇ ದಾಸರಾಗಬೇಕಾಗುತ್ತದೆ. ಆ ಮೂಲಕ ನಮ್ಮನ್ನು ನಾವೇ ನಾಶ ಮಾಡಿಕೊಳ್ಳಬೇಕಾಗುತ್ತದೆ.