ಬೆಂಗಳೂರು: ಕೋಲಾರ,ಮಾಲೂರು ಮತ್ತು ಹೊಸಕೋಟೆಯ ವಿಶೇಷ ಆರ್ಥಿಕ ವಲಯಗಳಲ್ಲಿರುವ ಕೈಗಾರಿಕೆಗಳ ನೀರಿನ ಕೊರತೆ ನೀಗಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಬೆಳ್ಳಂದೂರು ಕೆರೆಯಲ್ಲಿ ಸಂಗ್ರಹವಾಗಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವ ಯೋಜನೆ ರೂಪಿಸಿದೆ.
‘ಕೋಲಾರ, ಮಾಲೂರು ಮತ್ತು ಹೊಸಕೋಟೆಯ ವಿಶೇಷ ಆರ್ಥಿಕ ವಲಯಗಳಲ್ಲಿರುವ ಕಂಪೆನಿಗಳು ಕೆಲ ತಿಂಗಳಿಂದ ನೀರಿನ ಕೊರತೆ ಕುರಿತಂತೆ ಅಳಲು ತೋಡಿಕೊಳ್ಳುತ್ತಿವೆ’ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದರು.
‘ಈ ಮೂರು ವಿಶೇಷ ವಲಯಗಳಲ್ಲಿ ಇರುವ ಸುಮಾರು 150 ಕೈಗಾರಿಕೆಗಳಿಗೆ ದಿನನಿತ್ಯ ಬಳಕೆಗೆ ಅಗತ್ಯವಾದ ನೀರನ್ನು ಶುದ್ಧಿಕರಿಸಿ ಪೂರೈಸುವ ₨ 200 ಕೋಟಿ ವೆಚ್ಚದ ಪೈಪ್ಲೈನ್ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ’ ಎಂದು ಹಣಕಾಸು ಮತ್ತು ಕೈಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ಹೊಸಕೋಟೆಯಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಪ್ರತಿನಿತ್ಯ 40 ದಶಲಕ್ಷ ಲೀಟರ್ ನೀರನ್ನು ಎಸ್ಇಜೆಡ್ಗಳಿಗೆ ಪೂರೈಸುವುದು ಈ ಯೋಜನೆ ಉದ್ದೇಶವಾಗಿದೆ.
ಬಿಬಿಎಂಪಿ ಮಾಹಿತಿ ಹೇಳುವಂತೆ 287.33 ಚದರ ಕಿ.ಮೀ ಅಚ್ಚುಕಟ್ಟು ಪ್ರದೇಶ ಮತ್ತು 361 ಹೆಕ್ಟೇರ್ ನೀರು ಸಂಗ್ರಹಣಾ ಪ್ರದೇಶ ಹೊಂದಿರುವ ಬೆಳ್ಳಂದೂರು ಕೆರೆಗೆ ಪ್ರತಿದಿನ 400 ರಿಂದ 500 ಲೀಟರ್ ಕೊಳಚೆ ನೀರು ಬಂದು ಸೇರುತ್ತದೆ.
ಈ ಯೋಜನೆ ಕುರಿತಂತೆ ಕೆಐಎಡಿಬಿ ಈಗಾಲೇ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಿದ್ದು, ಟೆಂಡರ್ ಕರೆಯಲು ಇದೀಗ ಸಿದ್ಧವಾಗಿದೆ.
ಏತನ್ಮಧ್ಯೆ, ನಗರದ ಕೆಲ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಯೋಜನೆಯನ್ನು ಎಸ್ಇಜೆಡ್ಗೆ ಬದಲು ನಗರದಲ್ಲಿ ಒಣಗಿರುವ ಕೆರೆಗಳನ್ನು ತುಂಬಿಸಲು ಬಳಸಬೇಕು ಎಂದು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.