ಬೆಂಗಳೂರು: ರಾಜ್ಯ ಸರ್ಕಾರದ ಇ–ಆಡಳಿತ ವಿಭಾಗ ಡಿಜಿಟಲ್ ಇಂಡಿಯಾ ಸಪ್ತಾಹದ ಅಂಗವಾಗಿ, ಹೈಕೋರ್ಟ್ ನ್ಯಾಯಮೂರ್ತಿಗಳ ಸಭಾಂಗಣದಲ್ಲಿ ಸ್ಥಾಪಿಸಿರುವ ಪ್ರಾಯೋಗಿಕ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಗೆ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮಂಗಳವಾರ ಚಾಲನೆ ನೀಡಿದರು.
ಇದು ನ್ಯಾಯಾಲಯ ಮತ್ತು ಕಾರಾಗೃಹಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಸಿಟಿ ಸಿವಿಲ್ ಕೋರ್ಟ್ ಬೆಂಗಳೂರು, 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಗಳೂರು ಹಾಗೂ 6 ಜಿಲ್ಲಾ ಮಟ್ಟದ ಜೈಲುಗಳಾದ ಮೈಸೂರು, ಧಾರವಾಡ, ಕಲ್ಬುರ್ಗಿ, ಬೆಳಗಾವಿ, ವಿಜಯಪುರ ಮತ್ತು ಬಳ್ಳಾರಿ ಜೈಲುಗಳಿಗೂ ವಿಡಿಯೊ ಸಂಪರ್ಕ ನೀಡಲಾಗಿದೆ.
ಪ್ರಕರಣಗಳ ತ್ವರಿತ ವಿಲೇವಾರಿ, ನ್ಯಾಯಾಲಯಕ್ಕೆ ವಿಚಾರಣಾಧೀನ ಕೈದಿಗಳನ್ನು ಹಾಜರುಪಡಿಸುವ ವೆಚ್ಚ ತಗ್ಗಿಸುವುದು, ವಿಚಾರಣಾಧೀನ ಕೈದಿಗಳು ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಗುವುದನ್ನು ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ.