ಮನಿಲಾ (ಪಿಟಿಐ): ಚೆನ್ನೈನ ಕರ್ನಾಟಕ ಸಂಗೀತಗಾರ ಟಿ.ಎಂ ಕೃಷ್ಣ (40), ಮಲ ಹೊರುವ ಪದ್ಧತಿ ನಿರ್ಮೂಲನೆಗಾಗಿ ಹೋರಾಡುತ್ತಿರುವ ಕೋಲಾರದ ಬೆಜವಾಡ ವಿಲ್ಸನ್ (50) ಸೇರಿ ನಾಲ್ವರು ಸಾಧಕರು ಮತ್ತು ಎರಡು ಸಂಸ್ಥೆಗಳನ್ನು 2016ನೇ ಸಾಲಿನ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ಮನುಷ್ಯ ಜೀವನದ ಘನತೆಯ ಪರ ನಡೆಸುತ್ತಿರುವ ಹೋರಾಟಕ್ಕಾಗಿ’ ಸಫಾಯಿ ಕರ್ಮಚಾರಿ ಆಂದೋಲನದ (ಕೆಎಸ್ಎ) ರಾಷ್ಟ್ರೀಯ ಸಂಚಾಲಕ ವಿಲ್ಸನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಸಂಸ್ಕೃತಿಯ ಮೂಲಕ ಸಾಮಾಜಿಕ ಒಳಗೊಳ್ಳುವಿಕೆ’ಗೆ ನೀಡಿದ ಕೊಡುಗೆಗಾಗಿ ‘ಉದಯೋನ್ಮುಖ ನಾಯಕತ್ವ’ ವಿಭಾಗದಲ್ಲಿ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.
ಫಿಲಿಪ್ಪೀನ್ಸ್ನ ಕಾನ್ಚಿಟ ಕಾರ್ಪಿಯೊ ಮೊರಾಲ್ಸ್, ಇಂಡೊನೇಷ್ಯಾದ ಡೊಂಪೆಟ್ ಧುಫಾ, ಜಪಾನ್ನ ಜಪಾನ್ ಓವರ್ಸೀಸ್ ಕೋಆಪರೇಷನ್ ವಾಲಂಟಿಯರ್ಸ್ ಮತ್ತು ಲಾವೋಸ್ನ ವಿಯೆಂಟಿಯನ್ ರೆಸ್ಕ್ಯೂ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1957ರಲ್ಲಿ ಸ್ಥಾಪಿಸಲಾದ ರೇಮನ್ ಮ್ಯಾಗ್ಸೆಸೆಯನ್ನು ಏಷ್ಯಾದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ. ಫಿಲಿಪ್ಪೀನ್ಸ್ನ ಮೂರನೇ ಅಧ್ಯಕ್ಷರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.