ಸೋಲ್ (ಐಎಎನ್ಎಸ್/ ಎಎಫ್ಪಿ): ಇಲ್ಲಿನ ಬಿಯಾಂಗ್ಪಂಗ್್ ದ್ವೀಪದ ಸಮೀಪ ಮೂರು ದಿನಗಳ ಹಿಂದೆ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ೨೮ಕ್ಕೆ ಏರಿದೆ ಎಂದು ಅಧಿಕಾರಿಗಳು ಶುಕ್ರವಾರ ಖಚಿತಪಡಿಸಿದ್ದಾರೆ.
ಈ ನಡುವೆ, ದಕ್ಷಿಣ ಕೊರಿಯಾ ಕರಾವಳಿ ಭದ್ರತೆ ಹಾಗೂ ನೌಕಾ ಪಡೆ ಮುಳುಗು ತಜ್ಞರು ದೋಣಿಯ ಒಳಭಾಗವನ್ನು ಪ್ರವೇಶಿ ಬದುಕುಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ತನಿಖಾಧಿಕಾರಿಗಳು ದೋಣಿ ಕ್ಯಾಪ್ಟನ್್ ಲೀ ಜೂನ್ಸಿಯೋಕ್್ (೫೨)ಹಾಗೂ ಇಬ್ಬರು ಸಿಬ್ಬಂದಿ ವಿರುದ್ಧ ಬಂಧನ ವಾರಂಟ್್ ಹೊರಡಿಸಿದ್ದಾರೆ.
‘ದೋಣಿ ಮುಳುಗುವುದಕ್ಕೆ ಮುನ್ನ ಕ್ಯಾಪ್ಟನ್ ಲೀ, ಚುಕ್ಕಾಣಿಯನ್ನು ಮತ್ತೊಬ್ಬ ಅಧಿಕಾರಿಯ ಕೈಗೆ ಹಸ್ತಾಂತರಿಸಿದ್ದ ಎನ್ನುವುದು ಪ್ರಾಥನಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
೪೭೫ ಜನ ಪ್ರಯಾಣಿಸುತ್ತಿದ್ದ ಈ ದೋಣಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳೇ ಹೆಚ್ಚಿದ್ದರು.
ಗುರುವಾರ ರಾತ್ರಿ ಇಡೀ ದೋಣಿಯೊಳಗೆ ಪ್ರವೇಶಿಸಲು ಮುಳುಗು ತಜ್ಞರು ಶತ ಪ್ರಯತ್ನ ಮಾಡಿದ್ದರು. ಆದರೆ ಭಾರಿ ಗಾತ್ರದ ಅಲೆಗಳು ಹಾಗೂ ನೀರಿನ ರಭಸದಿಂದಾಗಿ ಈ ಪ್ರಯತ್ನ ಕೈಗೂಡಿರಲಿಲ್ಲ.
‘ಹಲವು ಪ್ರಯತ್ನಗಳ ಬಳಿಕ ಇಬ್ಬರು ಮುಳುಗು ತಜ್ಞರು ದೋಣಿಯ ಬಾಗಿಲು ತೆರೆದು ಸರಕು ದಾಸ್ತಾನು ವಿಭಾಗ ಪ್ರವೇಶಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈವರೆಗೆ ಒಟ್ಟು ೧೭೯ ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಇನ್ನು ೨೬೮ ಜನರ ಸುಳಿವು ಸಿಕ್ಕಿಲ್ಲ.
ಮುಳುಗಿರುವ ದೋಣಿಯನ್ನು ಮೇಲೆತ್ತುವ ಸಲುವಾಗಿ ನೌಕಾಪಡೆಯ ಮೂರು ದೊಡ್ಡ ಹಡಗುಗಳು ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಂದಿವೆ. ದೋಣಿಯನ್ನು ಮೇಲಕ್ಕೆತ್ತಲು ತಿಂಗಳಾನುಗಟ್ಟಲೆ ಸಮಯ ಹಿಡಿಯುವ ಸಾಧ್ಯತೆ ಇದೆ.
ಪರಿಹಾರ ಕಾರ್ಯಾಚರಣೆ: ಕರಾವಳಿ ರಕ್ಷಣಾ ಪಡೆ ಹಾಗೂ ನೌಕಾ ಪಡೆಯ ಒಟ್ಟು ೫೩೫ ಮುಳುಗು ತಜ್ಞರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೇ ೩೧ ವಿಮಾನಗಳು ಮತ್ತು ೧೭೩ ಹಡಗುಗಳನ್ನು ಕೂಡ ನಿಯೋಜಿಸಲಾಗಿದೆ.
ದೋಣಿ ಒಂದೋ ಬಂಡೆಗೆ ಡಿಕ್ಕಿ ಹೊಡೆದಿರಬೇಕು ಇಲ್ಲವೇ ಏಕಾಏಕಿ ಮಗುಚಿದ ಪರಿಣಾಮ ಮುಳುಗಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೋಣಿ ಮಗುಚಿ ಏಳು ಸಾವು
ಕುಪಾಂಗ್ (ಇಂಡೊನೇಷ್ಯಾ)(ಎಪಿ): ಸಮುದ್ರದಲ್ಲಿ ಗುಡ್ ಫ್ರೈಡೆ ಪರೇಡ್ ದೋಣಿ ಮಗುಚಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವ ಇಂಡೊನೇಷ್ಯಾದಲ್ಲಿ ಶುಕ್ರವಾರ ನಡೆದಿದೆ.
ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ಹಾಗೂ ಮೀನುಗಾರರು ಕಾರ್ಯಾಚರಣೆ ನಡೆಸಿ 30 ಜನರನ್ನು ರಕ್ಷಿಸಿದ್ದಾರೆ.
30 ಜನರ ಸಾಮರ್ಥ್ಯದ ದೋಣಿಯಲ್ಲಿ 70ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.