ನವದೆಹಲಿ (ಪಿಟಿಐ): ರೈಲು ಮಾರ್ಗಗಳ ಮಾಲಿನ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಪೀಠವು, ಹಳಿಗಳ ಮಾಲಿನ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದೆ.
ಇದುವರೆಗೆ ಎಷ್ಟು ಮಂದಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ವಿವರಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಹಸಿರು ನ್ಯಾಯಪೀಠವು ಉತ್ತರ ವಲಯ ರೈಲ್ವೆ ಜನರಲ್ ಮ್ಯಾನೇಜರ್ಗೆ ಆದೇಶಿಸಿದೆ.
ರೈಲು ಮಾರ್ಗ ಮತ್ತು ರೈಲ್ವೆ ಆಸ್ತಿಪಾಸ್ತಿಗಳನ್ನು ಮಾಲಿನ್ಯಗೊಳಿಸುವುದು ಆಕ್ಷೇಪಾರ್ಹ. ಆದ್ದರಿಂದ 2012ರ ರೈಲ್ವೆ ಮಂಡಳಿ ನಿಯಮಗಳು ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹಸಿರು ಪೀಠವು ಎಲ್ಲಾ ವಲಯಗಳ ಜನರಲ್ ಮ್ಯಾನೇಜರ್ಗಳಿಗೆ ಸೂಚಿಸಿದೆ.
ರೈಲ್ವೆ ಮಂಡಳಿ ನಿಯಮಗಳ ಪ್ರಕಾರ, ಇಲಾಖೆಗೆ ಸೇರಿದ ಸ್ಥಳಗಳಲ್ಲಿ ಉಗುಳಬಾರು, ಮೂತ್ರ ವಿಸರ್ಜನೆ ಮಾಡಬಾರದು, ಅಡುಗೆ ಮಾಡುವುದಕ್ಕೆ ಮತ್ತು ಪಾತ್ರ ತೊಳೆಯುವುದು ನಿಷೇಧ. ವಾಹನಗಳ ದುರಸ್ತಿ ಮತ್ತು ತೊಳೆಯುವುದು ಸಹ ನಿಷಿದ್ಧ. ಹೀಗಿದ್ದರೂ ರೈಲ್ವೆ ಪೊಲೀಸರು, ರೈಲು ನಿಲ್ದಾಣದ ಮುಖ್ಯಸ್ಥರು, ಮೇಲ್ವಿಚಾರಕರು ತಪ್ಪಿತಸ್ಥರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ವಿಮಾನದಲ್ಲಿ ಕೀಟನಾಶಕ ಸಿಂಪರಣೆ: ದೂರು ನವದೆಹಲಿ (ಪಿಟಿಐ): ಪ್ರಯಾಣಿಕರು ವಿಮಾನದಲ್ಲಿರುವಾಗಲೇ ಕೀಟ ನಾಶಕ ಸಿಂಪಡಿಸಿದ ಬಗ್ಗೆ ಅಮೆರಿಕ ಮೂಲದ ನರರೋಗ ತಜ್ಞರೊಬ್ಬರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠವು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. |
ಪರಿಸರ ಇಲಾಖೆಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶೀಘ್ರದಲ್ಲಿ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗುತ್ತದೆ ಎಂದು ಪರಿಸರ ಮತ್ತು ಅರಣ್ಯ ಇಲಾಖೆಯ ಪರ ವಕೀಲರು ತಿಳಿಸಿದರು.
ರೈಲು ಹಳಿಗಳ ಪಕ್ಕ ಇರುವ ಗುಡಿಸಲುಗಳೇ ಮಾಲಿನ್ಯಕ್ಕೆ ಮುಖ್ಯ ಕಾರಣ. ಅವುಗಳನ್ನು ತೆರುವುಗೊಳಿಸಿ ಬದಲಿ ಕಟ್ಟಡ ನಿರ್ಮಿಸಲು ದೆಹಲಿ ಮಹಾನಗರ ಪಾಲಿಕೆ ಸೇರಿದಂತೆ ಮೂರು ಪಾಲಿಕೆಗಳಿಗೆ ಒಂದು ವರ್ಷದ ಹಿಂದೆಯೇ 1,125 ಕೋಟಿ ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರೈಲ್ವೆ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಈ ತಿಂಗಳ 24ರಂದು ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಮೂರು ಮಹಾನಗರ ಪಾಲಿಕೆಗಳ ಆಯುಕ್ತರು ಹಾಜರಿರಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ವಕೀಲರಾದ ಸಲೋನಿ ಸಿಂಗ್ ಮತ್ತು ಆರುಷ್ ಪಠಾನಿಯಾ ಅವರು ಅರ್ಜಿ ಸಲ್ಲಿಸಿ, ರೈಲ್ವೆ ಪರಿಸರ ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.