ತಿರುವನಂತಪುರ (ಪಿಟಿಐ): ತರಗತಿಯಲ್ಲಿ ಮಾತನಾಡಿದ ಎಂಬ ಕಾರಣಕ್ಕೆ ನಾಲ್ಕು ವರ್ಷದ ಪ್ರಾಥಮಿಕ ಪೂರ್ವ ತರಗತಿ ಮಗುವನ್ನು ಶ್ವಾನ ಕೊಠಡಿಯಲ್ಲಿ ಕೂಡಿ ಹಾಕಿ ಶಿಕ್ಷೆ ನೀಡಿದ ಖಾಸಗಿ ಶಾಲೆಯನ್ನು ಮುಚ್ಚಲಾಗಿದೆ.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ನೀಡಿದ ವರದಿಯನ್ನು ಆಧರಿಸಿ ಶಾಲೆಯನ್ನು ಮುಚ್ಚುವ ಸಂಬಂಧ ಕೇರಳ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ರಾಜಧಾನಿಯ ಹೊರ ವಲಯದಲ್ಲಿ ಇರುವ ಈ ಶಾಲೆಯಲ್ಲಿ ಎಲ್ಕೆಜಿಯಿಂದ 7ನೇ ತರಗತಿವರೆಗೆ ಬೋಧಿಸಲಾಗುತ್ತದೆ. ಶಾಲೆಯ ಶಿಕ್ಷಕರು ಎಸಗಿದ ತಪ್ಪನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಉಪ ನಿರ್ದೇಶಕರು ವರದಿ ನೀಡಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಕೇರಳ: 2ಕ್ಕೆ ಚಾಲನೆ
ತಿರುವನಂತಪುರ (ಪಿಟಿಐ): ಕೇರಳವನ್ನು ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆಂದೋಲನಕ್ಕೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಚಾಲನೆ ದೊರೆಯಲಿದೆ.
ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಈ ವೇಳೆ ಗಾಯಕ ಕೆ.ಜೆ.ಯೇಸುದಾಸ್, ಕವಿ ಸುಗತಕುಮಾರಿ ಉಪಸ್ಥಿತರಿರುವರು.
ಕೇರಳದಾದ್ಯಂತ ಸಂಗ್ರಹವಾಗುವ ತ್ಯಾಜ್ಯವನ್ನು ರಾಜ್ಯ ಸರ್ಕಾರದ ‘ಕ್ಲೀನ್ ಕೇರಳ ಕಂಪೆನಿ’ ಸಂಸ್ಕರಿಸಲಿದೆ ಎಂದು ನಗರಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.