ಮುಂಬೈ: ಗಂಡ ರಾಜ್ಯದ ಮುಖ್ಯಮಂತ್ರಿಯಾದರೂ ತನ್ನ ಕೆಲಸವನ್ನು ಬಿಡಲು ಇಷ್ಟಪಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ರಾನಡೆ ಫಡ್ನವೀಸ್ ಹೇಳಿದ್ದಾರೆ.
‘ಮಹಿಳೆಯರು ಸ್ವತಂತ್ರರಾಗಿರಬೇಕು. ಈ ಹಂತಕ್ಕೆ ತಲುಪಲು ನಾನು ಬಹಳ ಕಷ್ಟಪಟ್ಟಿದ್ದೇನೆ’ ಎಂದು ನಾಗಪುರದಲ್ಲಿ ಆ್ಯಕ್ಸಿಸ್ ಬ್ಯಾಂಕ್ನ ಸಹ ಉಪಾಧ್ಯಕ್ಷೆಯಾಗಿರುವ ಅಮೃತಾ ಹೇಳಿದ್ದಾರೆ. ಮುಂಬೈಗೆ ವರ್ಗಾವಣೆ ಕೋರಿ ಅವರು ಈಗಾಗಲೇ ಮನವಿಯನ್ನೂ ಸಲ್ಲಿಸಿದ್ದಾರೆ. ‘ಫಡ್ನವೀಸ್ ಅವರಿಗೆ ಉತ್ತಮ ಜ್ಞಾನ ಇದೆ.
ಅವರು ವಿವಿಧ ವಿಷಯಗಳನ್ನು ಅದರಲ್ಲೂ ವಿಶೇಷವಾಗಿ ಬಜೆಟ್ ಸಂಬಂಧಿ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ. ಓದಿನ ಮೂಲಕ ಅವರು ತಮ್ಮ ಜ್ಞಾನವನ್ನು ಪರಿಷ್ಕರಿಸುತ್ತಲೇ ಇರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹಲವು ವರ್ಷಗಳಿಂದ ಭ್ರಷ್ಟಾಚಾರದಿಂದ ನಲುಗಿ ಹೋಗಿರುವ ಮಹಾರಾಷ್ಟ್ರದ ಅಭಿವೃದ್ಧಿಗೆ ಬೇಕಾದ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ’ ಎಂದು ಗಂಡನ ಬಗ್ಗೆ ಅಮೃತಾ ಹೇಳಿದ್ದಾರೆ.
ಮೊದಲ ದಿನದಿಂದಲೇ ಕೆಲಸಕ್ಕೆ ತೊಡಗಬೇಕು ಎಂಬುದು ಗಂಡನಿಗೆ ಅಮೃತಾ ನೀಡುವ ಸಲಹೆಯಾಗಿದೆ. ‘ಅವರು ತಪ್ಪು ಮಾಡುತ್ತಿದ್ದಾರೆ ಎಂದು ಅನಿಸಿದರೆ ಅವರನ್ನು ತಿದ್ದಲು ಹಿಂದೇಟು ಹಾಕುವುದಿಲ್ಲ’ ಎಂದೂ ಅಮೃತಾ ತಿಳಿಸಿದ್ದಾರೆ.