ಬೆಂಗಳೂರು: ‘ಸುಪ್ರೀಂ ಕೋರ್ಟ್ ಹೊರಡಿಸಿರುವ ಸುಗ್ರೀವಾಜ್ಞೆಯಂತೆ ರಾಜ್ಯದಲ್ಲಿ ಗಣಿ ಕಂಪೆನಿಗಳ ಗುತ್ತಿಗೆ ನವೀಕರಣವಾಗಿದೆ’ ಎಂದು ಭಾರತೀಯ ಗಣಿಗಾರಿಕೆ ಉದ್ಯಮಗಳ ಒಕ್ಕೂಟದ (ಎಫ್ಐಎಂಐ) ದಕ್ಷಿಣ ವಲಯದ ಅಧ್ಯಕ್ಷ ಶಾಂತೇಶ್ ಗುರೆಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಜನವರಿ 12ರಂದು ತಿದ್ದುಪಡಿ ತಂದಿದೆ. ಅದರ ಅನ್ವಯ ಆರು ಗಣಿ ಕಂಪೆನಿಗಳ ಗುತ್ತಿಗೆ ನವೀಕರಿಸಲಾಗಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದರು.
ನಿಯಮ ಉಲ್ಲಂಘಿಸಿ ಸರ್ಕಾರ ಗಣಿ ಕಂಪೆನಿಗಳ ಗುತ್ತಿಗೆ ನವೀಕರಿಸಿದೆ. ಇದ ರಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ‘ಸಿ’ ಗುಂಪಿನ ಗಣಿ ಕಂಪೆನಿ ಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ‘ಎ’ ಮತ್ತು ‘ಬಿ’ ಗುಂಪಿನ ಗಣಿ ಕಂಪೆನಿಗಳು ಒಳಪಡುವುದಿಲ್ಲ ಎಂದು ಹೇಳಿದರು.
ಕೇಂದ್ರ ಗಣಿ ಸಚಿವಾಯವು ಫೆ. 5ರಂದು ಎಲ್ಲಾ ರಾಜ್ಯಗಳಿಗೂ ಆದೇಶ ಹೊರಡಿಸಿ ಫೆ. 28ರ ಒಳಗೆ ಗಣಿ ಕಂಪೆನಿಗಳ ಗುತ್ತಿಗೆ ಅವಧಿ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ಹೇಳಿತ್ತು ಎಂದು ತಿಳಿಸಿದರು.