ಅರೆಬೆತ್ತಲೆ ಮೆರವಣಿಗೆ: ಗದುಗಿನಲ್ಲಿ ವಿವಿಧ ಕನ್ನಡಪರದ ಸಂಘಟನೆಗಳ ಸದಸ್ಯರು ಗುರುವಾರ ಬೆಳಿಗ್ಗೆ 6ಗಂಟೆಗೇ ಪ್ರತಿಭಟನೆ ಪ್ರಾರಂಭಿಸಿದ್ದರು.ಮುಳಗುಂದ ನಾಕಾದಲ್ಲಿ ಟಯರ್ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲು ಮುಂದಾದರು. ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ. ನಂತರ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಜಮಾಯಿಸಿ, ಅರೆಬೆತ್ತಲೆ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಲ್ಲಿಂದ ಬೈಕ್ ಮೂಲಕ ಗ್ರೇನ್ ತರಕಾರಿ ಮಾರುಕಟ್ಟೆಗೆ ತೆರಳಿ, ತರಕಾರಿ ತುಂಬಿದ್ದ ಚೀಲಗಳನ್ನು ಎತ್ತಿ ಎಸೆದು ಮಾರುಕಟ್ಟೆ ಬಂದ್ ಮಾಡುವಂತೆ ಒತ್ತಾಯಿಸಿದರು. ಈ ದಾಂದಲೆಯಿಂದ ಭಯಗೊಂಡ ಚಾಲಕನೊಬ್ಬ, ಅವಸರದಲ್ಲಿ ತರಕಾರಿ ತುಂಬಿದ್ದ ಟ್ರಕ್ ಅನ್ನು ಹಿಂದಕ್ಕೆ ಚಾಲನೆ ಮಾಡುವಾಗ, ಪೊಲೀಸ್ ಜೀಪ್ಗೆ ತಾಗಿ ಜಖಂಗೊಳಿಸಿತು. ಇದರಿಂದ ಕೆರಳಿದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದರು. ವಿವಿಧ ಸಂಘಟನೆಗಳಿಗೆ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿ ಕೊಂಡೊಯ್ಯದರು.
ಬಂದ್: ಬಂದ್ಗೆ ಕರೆ ನೀಡಿದ್ದರಿಂದ ಗುರುವಾರ ಜಿಲ್ಲೆಯ 7 ಡಿಪೊಗಳಿಂದ ಕೆಎಸ್ಆರ್ಟಿಸಿ ವಾಹನಗಳು ಹೊರಬರಲಿಲ್ಲ. ಖಾಸಗಿ ವಾಹನ ಸಂಚಾರವೂ ವಿರಳವಾಗಿತ್ತು.ಬೆಂಗಳೂರು, ಮಂಗಳೂರು ಸೇರಿ ದೂರದ ಊರುಗಳಿಂದ ನಗರಕ್ಕೆ ಬಂದವರು, ಮನೆಗಳಿಗೆ ತೆರಳಲು ಪ್ರಯಾಸಪಟ್ಟರು. ಸಂಸದ ಶಿವಕುಮಾರು ಉದಾಸಿ ಜನಸಂಪರ್ಕ ಕಚೇರಿ ಮೇಲೆ ಪ್ರತಿಭಟನಾಕಾರರು ಬುಧವಾರ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಗುರುವಾರ ಅವರ ಕಚೇರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಕ್ಷಿಪ್ರ ಕಾರ್ಯಪಡೆ ದೌಡು: ಹೆಚ್ಚುವರಿ ಭದ್ರತೆಗಾಗಿ ಕ್ಷಿಪ್ರ ಕಾರ್ಯಪಡೆಯ 6 ತುಕಡಿಗಳನ್ನು ಬೆಂಗಳೂರಿನಿಂದ ಜಿಲ್ಲೆಗೆ ಕರೆಯಿಸಿಕೊಳ್ಳಲಾಗುತ್ತಿದೆ. ಈಗಾಗಲೇ 6 ಕೆಎಸ್ಆರ್ಪಿ ತುಕಡಿಗಳು ನಗರದಲ್ಲಿ ಬೀಡುಬಿಟ್ಟಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.