ಬೆಂಗಳೂರು: ಛತ್ತೀಸಗಡ ರಾಜ್ಯದ ಬುಡಕಟ್ಟು ಜನಾಂಗದ ಯುವಕ ಹಾಗೂ ಯುವತಿಯರಿಗೆ ಕರ್ನಾಟಕ ಸಂಸ್ಕೃತಿ ಪರಿಚಯಿಸುವ ‘8ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ’ಕ್ಕೆ ಶನಿವಾರ ಚಾಲನೆ ದೊರೆಯಿತು.
ನೆಹರು ಯುವ ಕೇಂದ್ರ ಕರ್ನಾಟಕ ವಲಯ ವತಿಯಿಂದ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಬುಡಕಟ್ಟು ಜನಾಂಗದ ಯುವಜನರು ತಮ್ಮ ಸಂಸ್ಕೃತಿ ಬಿಂಬಿಸುವ ವಿವಿಧ ಬಗೆಯ ನೃತ್ಯ ಪ್ರದರ್ಶಿಸಿ ಗಮನಸೆಳೆದರು.
ಫೆ. 11ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಛತ್ತೀಸಗಡ ರಾಜ್ಯದ 9 ಜಿಲ್ಲೆಗಳ 221 ಯುವಜನರು ಭಾಗವಹಿಸಿದ್ದಾರೆ. ಅವರು ತಮ್ಮ ಸಂಸ್ಕೃತಿ ಉಡುಗೆ ತೊಟ್ಟು ಸ್ಥಳೀಯ ಜನರೊಂದಿಗೆ ಬೆರೆಯಲಿದ್ದಾರೆ.
ಸ್ಥಳೀಯ ಸಂಸ್ಕೃತಿ ಬಗ್ಗೆ ಮಾಹಿತಿ ಪಡೆಯಲಿರುವ ಬುಡಕಟ್ಟು ಜನಾಂಗದ ಯುವಜನರು, ತಮಗಿರುವ ಸಂದೇಹಗಳನ್ನು ಸಂವಾದದಲ್ಲಿ ಪರಿಹರಿಸಿಕೊಳ್ಳಲಿದ್ದಾರೆ. ವಿಶೇಷ ಉಪನ್ಯಾಸಗಳಿದ್ದು, ಪರಿಣಿತ ತಜ್ಞರು ಸಂಸ್ಕೃತಿ ಸಂಬಂಧಿ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ವಿಶೇಷವಾಗಿ ಪ್ರೇಕ್ಷಣೀಯ ಸ್ಥಳಗಳ ಕುರಿತು ತಿಳಿಸಲು ಬೆಂಗಳೂರು ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಪ್ರಯುಕ್ತ ವಿಧಾನಸೌಧ, ಮೆಟ್ರೊ, ಉದ್ಯಾನಗಳು ಹಾಗೂ ನಗರದ ಇತರೆ ಸ್ಥಳಗಳಿಗೆ ಯುವಜನರು ಭೇಟಿ ನೀಡಲಿದ್ದಾರೆ.