ದೊಡ್ಡಬಳ್ಳಾಪುರ: ತಾಲ್ಲೂಕಿನ ಗಾಳಿಪಟ ಕಲಾಸಂಘದ ವತಿಯಿಂದ ಪಟ್ಟಣದಲ್ಲಿ ಸೋಮವಾರ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ ನಗರದ ಮೇಘಾಂಜಲಿ ಕಲ್ಯಾಣ ಮಂದಿರದ ಸಮೀಪ ನಡೆಯಿತು. ಶಾಸಕ ಟಿ. ವೆಂಕಟರಮಣಯ್ಯ ಗಾಳಿಪಟ ಹಾರಿಸುವ ಸ್ಪರ್ಧೆಗೆ ಚಾಲನೆ ನೀಡಿದರು. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸುಮಾರು ೧೫೦ ಸ್ಪರ್ಧಿಗಳು ಭಾಗವಹಿಸಿದ್ದರು.
ಇತ್ತೀಚೆಗೆ ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ‘ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ’ ‘ಶಾಶ್ವತ ನೀರಾವರಿ ಯಾವಾಗ?’ ‘ಕತ್ತಲಲ್ಲಿ ಕರ್ನಾಟಕ’ ‘ನೇತ್ರದಾನ ಮಾಡಿ’ ‘ನೀರನ್ನು ಸಂರಕ್ಷಿಸಿ’ ಮತ್ತಿತರ ಸಂದೇಶಗಳನ್ನು ಹೊತ್ತ ನೂರಾರು ಗಾಳಿಪಟಗಳು ಗಮನ ಸೆಳೆದವು.
ಇದರೊಂದಿಗೆ ಆಂಜನೇಯ ಪಟ, ಗಣೇಶ ಪಟ, ಬುಗುರಿ ಪಟ ಮುಂತಾದ ಚಿತ್ತಾಕರ್ಷಕ ಹಾಗೂ ಸಂದೇಶ ಸಾರುವ ಗಾಳಿಪಟಗಳು ಮೈದಾನದಲ್ಲಿ ಸೇರಿದ್ದ ಸಹಸ್ರಾರು ನಾಗರಿಕರಿಗೆ ಮನರಂಜನೆಯ ಜೊತೆಗೆ ಸಂಭ್ರಮ, ಮುದ ನೀಡಿದವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್. ಪ್ರಭುದೇವ್, ಗಾಳಿಪಟ ಕಲೆಯಲ್ಲಿ ದೊಡ್ಡಬಳ್ಳಾಪುರ ತನ್ನದೇ ಆದ ಛಾಪು ಮೂಡಿಸಿದೆ. ಜಾನಪದ ಲೋಕದ ರೂವಾರಿ ಎಚ್.ಎಲ್. ನಾಗೇಗೌಡ ಅವರು ಜಾನಪದ ಕಲಾವಿದರನ್ನು, ಗಾಳಿಪಟ ಕಲೆಯನ್ನು ಉತ್ತೇಜಿಸಿದ್ದರು. ಪಾರಂಪರಿಕ ಉತ್ಸವಗಳಲ್ಲಿ ಗಾಳಿಪಟ ಹಾರಿಸುವ ಕಲೆ ಮುಖ್ಯವಾಗಿದೆ.
ಭಾವೈಕ್ಯತೆಯೊಂದಿಗೆ ಕಲೆಯನ್ನು ಉತ್ತೇಜಿಸುವ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ. ವಿಜಯಕುಮಾರ್, ದೊಡ್ಡ-ಬಳ್ಳಾಪುರ ಗಾಳಿಪಟ ಕಲಾಸಂಘದ ಅಧ್ಯಕ್ಷ ಎಚ್.ಸಿ. ಜಗದೀಶ್, ಕಿಮ್ಸ್ ಅಧ್ಯಕ್ಷ ಬಿ. ಮುನೇಗೌಡ, ಅಂತರಾಷ್ಟ್ರೀಯ ಗಾಳಿಪಟು ಕ್ರೀಡಾಳು ಸಂದೇಶ್ಗಡ್ಡಿ, ನಗರಸಭಾ ಸದಸ್ಯರಾದ ಕೆ.ಎಚ್. ವೆಂಕಟರಾಜು, ಎಚ್.ಎಸ್. ಶಿವಶಂಕರ್, ಕೆ.ಜಿ.ರಘುರಾಂ, ಮತ್ತಿತರರು ಹಾಜರಿದ್ದರು.