ಗಾಂಧಿನಗರ (ಪಿಟಿಐ) : ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಕೊನೆಗೂ ತಮ್ಮ ಅಸಮಾಧಾನಗಳನ್ನು ಬದಿಗಿಟ್ಟು, ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೆತ್ರದಿಂದ ಶನಿವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ನರೇಂದ್ರ ಮೋದಿ ಸಹ ಅವರ ಜತೆಗಿದ್ದು ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎನ್ನುವ ಸಂದೇಶ ನೀಡಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಹುದೊಡ್ಡ ಅಂತರದಿಂದ ಅಡ್ವಾಣಿ ಅವರನ್ನು ಗೆಲ್ಲಿಸುವಂತೆ ತಿಳಿಸಿದರು.
‘ಮೋದಿ ಓರ್ವ ಉತ್ತಮ ಆಡಳಿತಗಾರ ಮಾತ್ರವಲ್ಲ ಚತುರ ಮತ್ತು ಸಮರ್ಥ ಕಾರ್ಯಕ್ರಮ ನಿರ್ವಾಹಕ ಸಹ ಹೌದು. ಪಕ್ಷ ವಹಿಸುವ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಹೀಗಾಗಿ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲದೆ ಆರ್ಎಸ್ಎಸ್ ನಲ್ಲೂ ಪ್ರಭಾವಿ ಎನಿಸಿಕೊಂಡಿದ್ದಾರೆ’ ಎಂದು ಅಡ್ವಾಣಿ ಅವರು ಮೋದಿ ಗುಣಗಾನ ಮಾಡಿದರು.