ನವದೆಹಲಿ (ಪಿಟಿಐ): ನರೇಂದ್ರ ಮೋದಿ ನೇತೃತ್ವದ ಎನ್ಡಿಎ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ಬಗ್ಗೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.
ಬಿಜೆಪಿಯ ಹಳೆಯ ಮಿತ್ರಪಕ್ಷವಾದ ಶಿವಸೇನೆ, ಪಕ್ಷದ ಮುಖಂಡ ಅನಂತ್ ಗೀತೆ ಅವರಿಗೆ ನೀಡಿರುವ ಬೃಹತ್ ಕೈಗಾರಿಕೆಯ ಖಾತೆಯನ್ನು ಬದಲಿಸುವಂತೆ ಒತ್ತಾಯಿಸುವ ಸಾಧ್ಯತೆ ಇದೆ.
ಈ ಖಾತೆಯನ್ನು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬುಧವಾರ (ಮೇ 28) ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅನಂತ್ ಗೀತೆ ತಿಳಿಸಿದ್ದಾರೆ.
ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಠಾಕ್ರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಮಂಗಳವಾರ ಭೇಟಿ ಮಾಡಿ, ಖಾತೆ ಹಂಚಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಅನಂತ್ ಗೀತೆ ಕೂಡ ಸಿಂಗ್ ಅವರನ್ನು ಭೇಟಿ ಮಾಡಿದ್ದರು.
ಈ ಮಧ್ಯೆ, ಅನಂತ್ ಗೀತೆ ಅವರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ತಮಗೆ ನೀಡಿರುವ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿಲ್ಲ. ಆದರೆ, ಮಂಗಳವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು.
‘ಪಕ್ಷ ಬೇರೆ ಖಾತೆಯ ನಿರೀಕ್ಷೆಯಲ್ಲಿದೆ’ ಎಂದು ತಿಳಿಸಿದ ಅನಂತ್ ಗೀತೆ, ಯಾವ ಖಾತೆಯ ನಿರೀಕ್ಷಿಸಲಾಗಿದೆ ಎಂಬುದನ್ನು ಖಚಿತವಾಗಿ ಹೇಳಲಿಲ್ಲ.
ನ್ಯಾಯಾಂಗ ಆಯೋಗಕ್ಕೆ ಆದ್ಯತೆ
ರಾಷ್ಟ್ರ ಮಟ್ಟದಲ್ಲಿ ನ್ಯಾಯಾಂಗ ಆಯೋಗ ರಚನೆಗೆ ಸರ್ಕಾರ ಅದ್ಯತೆ ನೀಡಲಿದೆ ಎಂದು ನೂತನ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.
‘ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳ, ನ್ಯಾಯಾಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡುವುದು. ದೇಶವನ್ನು ಅಂತರರಾಷ್ಟ್ರೀಯ ನ್ಯಾಯಪಂಚಾಯಿತಿಯ ಮಧ್ಯಸ್ಥಿಕೆ, ರಾಜಿ ಸಂಧಾನದ ಕೇಂದ್ರವನ್ನಾಗಿಸುವುದು ನಮ್ಮ ಅದ್ಯತೆ’ ಎಂದರು.