ಬೆಳಗಾವಿ: ನಗರದ ಅನಗೋಳದ ಶಾಸ್ತ್ರಿ ನಗರದಲ್ಲಿ ಸೋಮವಾರ ತಡ ರಾತ್ರಿ ಗುಂಪು ಘರ್ಷಣೆಯಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಹಲವು ವಾಹನಗಳು ಜಖಂಗೊಂಡಿವೆ. ಈ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಶಕ್ತಿ ನಗರದ ವಿದ್ಯಾರ್ಥಿಯೊಬ್ಬ ನಾಲ್ಕನೇ ರೈಲ್ವೆ ಗೇಟ್ ಬಳಿ ಸ್ಟೇಶನರಿ ಅಂಗಡಿಯಲ್ಲಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾಗ, ಕೆಲವು ಯುವಕರು ಉಗುಳಿದ ಎಂಜಲು ಆತನಿಗೆ ತಾಗಿದೆ. ಇದನ್ನು ಪ್ರಶ್ನಿಸಿರುವುದಕ್ಕೆ ಯುವಕರ ಗುಂಪು ಆತನ ಜೊತೆ ಇನ್ನೊಬ್ಬ ಯುವಕನನ್ನು ಥಳಿಸಿದೆ.
ಈ ಸುದ್ದಿ ಹರಡುತ್ತಿದ್ದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ. ಕೆಲವು ಕ್ಷಣಗಳಲ್ಲೇ ಕಲ್ಲು ತೂರಾಟ ನಡೆದಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಆಟೊ, ಕಾರಿನ ಗಾಜುಗಳನ್ನು ಒಡೆಯಲಾಗಿದೆ. ಬೈಕ್ಗಳನ್ನು ಜಖಂಗೊಳಿಸಲಾಗಿದೆ. ಕೆಲವು ಮನೆಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಇದರಿಂದಾಗಿ ರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.