ನವದೆಹಲಿ (ಪಿಟಿಐ): ಆದಾಯದಲ್ಲಿ ಸೋರಿಕೆಯಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರಿ ಗುತ್ತಿಗೆದಾರರು ಅಥವಾ ಪೂರೈಕೆದಾರರ ತೆರಿಗೆ ಪಾವತಿ ವಿವರಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ಕೇಂದ್ರ ವಿಚಕ್ಷಣಾ ಆಯೋಗ (ಸಿವಿಸಿ) ಸೂಚಿಸಿದೆ.
ಪ್ರಾಕೃತಿಕ ವಿಕೋಪ ಮತ್ತು ತುರ್ತು ಪರಿಸ್ಥಿತಿಯಂತಹ ಅನಿವಾರ್ಯ ಸನ್ನಿವೇಶಗಳನ್ನು ಹೊರತುಪಡಿಸಿ ಒಂದೇ ಟೆಂಡರ್ ಅಥವಾ ನಾಮನಿರ್ದೇಶನದ ಆಧಾರದಲ್ಲಿ ಗುತ್ತಿಗೆಗಳನ್ನು ನೀಡುವ ಪದ್ಧತಿಯನ್ನು ಅನುಸರಿಸುವಂತಿಲ್ಲ ಎಂದು ಸಿವಿಸಿ ಕೇಂದ್ರದ ಎಲ್ಲಾ ಸಚಿವಾಲಯ ಮತ್ತು ಇಲಾಖೆಗಳಿಗೆ ಕಳುಹಿಸಿರುವ ನೂತನ ಮಾರ್ಗದರ್ಶಿ ಸೂತ್ರದಲ್ಲಿ ನಿರ್ದೇಶಿಸಿದೆ.‘ಗುತ್ತಿಗೆ ವಲಯದಲ್ಲಿನ ತೆರಿಗೆ ವಂಚನೆ ಕಳವಳಕಾರಿ ಸಂಗತಿ. ಹೀಗಾಗಿ ಗುತ್ತಿಗೆದಾರರು ಅಥವಾ ಪೂರೈಕೆದಾರರ ತೆರಿಗೆ ಪಾವತಿಯನ್ನು ಸೂಕ್ತವಾಗಿ ಪರಿಶೀಲಿಸುವುದು ಅತ್ಯಗತ್ಯ’ ಎಂದು ಸಿವಿಸಿ ಹೇಳಿದೆ.
ಗುತ್ತಿಗೆ ಒಪ್ಪಂದದ ನಿಯಮಾವಳಿಗಳಿಗೆ ಅನುಗುಣವಾಗಿ ಕಡ್ಡಾಯ ತೆರಿಗೆ ಪಾವತಿ ಮತ್ತು ಕರ್ತವ್ಯ ನಿರ್ವಹಣೆ ಹೊಣೆಯನ್ನು ನಿಭಾಯಿಸುವಂತೆ ನಿರ್ದೇಶಿಸಿದೆ.