ಲಿಂಗಸುಗೂರು: ಉತ್ತರ ಕರ್ನಾಟಕ ಪ್ರದೇಶದ ಐತಿಹಾಸಿಕ ದೇವಸ್ಥಾನಗಳಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಸುಕ್ಷೇತ್ರ ಗುರುಗುಂಟ ಅಮರೇಶ್ವರ ದೇವಸ್ಥಾನವು ಒಂದು.
ಜಾತ್ರಾಮಹೋತ್ಸವದ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಹೋಳಿಹುಣ್ಣಿಮೆ ಮುಂಚೆ ಒಂದು ವಾರದಿಂದ ನಡೆದುಕೊಂಡು ಬರುತ್ತವೆ. ಹುಣ್ಣಿಮೆ ದಿನ (ಗುರುವಾರ) ಮಹಾರಥೋತ್ಸವದ ಮೂಲಕ ಆರಂಭಗೊಳ್ಳುವ ಜಾತ್ರೆ ಯುಗಾದಿ ಪಾಡ್ಯಕ್ಕೆ ಅಂತ್ಯಗೊಳ್ಳುವುದು ವಾಡಿಕೆ.
ಹೋಳಿ ಹುಣ್ಣಿಮೆ ದಿನ ನಡೆಯುವ ಜಾತ್ರಾಮಹೋತ್ಸವದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ತುಮಕೂರು, ಬೆಂಗಳೂರು, ಮೈಸೂರು, ಮಹಾರಾಷ್ಟ್ರದ ಸೊಲ್ಲಾಪೂರ, ಪುನಾ, ಮುಂಬೈ. ಆಂಧ್ರ ಪ್ರದೇಶದ ಕರ್ನೂಲ್, ಮಹಿಬೂಬನಗರ, ಆದೋನಿ, ಹೈದರಬಾದ್ ಪ್ರದೇಶಗಳಿಂದ ಭಕ್ತರು ಬರುತ್ತಾರೆ.
ಹೋಳಿ ಹುಣ್ಣಿಮೆ ದಿನವಾದ ಮಾರ್ಚ್ 5 ರಂದು ಸಂಜೆ ಮಹಾರಥೋತ್ಸವ ಜರುಗಲಿದೆ.ದೇವಸ್ಥಾನದ ಆವರಣ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿನ ಕಳ್ಳತನ ಕಣ್ಗಾವಲಾಗಿ 20 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ವೈ.ಬಿ. ಶಾಂತರಾಜು ಹೇಳಿದರು.