ಯಾದಗಿರಿ: ಬಿಟಿ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕ ಕೀಟ ಬಾಧೆ ಕಂಡು ಬರುತ್ತಿದ್ದು, ರೈತರು ಹತ್ತಿ ಬೀಜಗಳನ್ನು ಬಿತ್ತುವ ಮುನ್ನ ಕೃಷಿ ಅಧಿಕಾರಿಗಳ ಸಲಹೆ ಪಡೆಯಬೇಕು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಜೈರಾಮ್ ಚವ್ಹಾಣ ಹೇಳಿದರು. ಹಿರೆವಡಗೇರಾ ರೈತ ಸಂಪರ್ಕ ಕೇಂದ್ರದಲ್ಲಿ ಆತ್ಮಾ ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೀಟ ನಿರ್ವಹಣೆ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹತ್ತಿ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಗುಲಾಬಿ ಕೀಟದ ಬಾಧೆ ಬಹಳಷ್ಟು ಕಾಡುತ್ತಿದೆ. ಇದೊಂದು ಮಾರಕ ಕಾಯಿಲೆಯಾಗಿದೆ. ರೈತರು ಮುಂಜಾಗೃತೆ ಕ್ರಮ ಕೈಗೊಳ್ಳುವ ಮೂಲಕ ಕೀಟ ಬಾಧೆಯಿಂದ ಬೆಳೆಗಳನ್ನು ರಕ್ಷಿಸುವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಈ ಕೀಟ ನಾಶ ಪಡಿಸಲು ಜಿನ್ ನಿರ್ಮಲೀಕರಣ ಅನುಸರಿಸಬೇಕು. ಬಾಧೆಗೆ ತುತ್ತಾದ ಬೀಜಗಳನ್ನು ಗುಂಡಿ ತೋಡಿ ಅದರಲ್ಲಿ ಹಾಕಿ ನಾಶ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ. ಮರೆಪ್ಪ ನಾಟೆಕಾರ, ರೈತರು ಹತ್ತಿ ಬೀಜ ಖರೀದಿಸುವಾಗ ಬಹಳ ಎಚ್ಚರವಹಿಸಬೇಕು.
ಇತ್ತಿಚೀನ ದಿನಗಳಲ್ಲಿ ಕಳಪೆ ಮಟ್ಟದ ಬೀಜ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ರೈತರು ಹತ್ತಿ ಬೀಜ ಖರೀದಿಸುವ ಮುಂಚೆ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರು ಹೇಳುವ ಬೀಜಗಳನ್ನೇ ಖರೀದಿಸಬೇಕು ಎಂದು ಸಲಹೆ ನೀಡಿದರು. ರೈತರಾದ ಸಾಬಣ್ಣ, ರಾಘವೇಂದ್ರ, ಶ್ರೀನಿವಾಸ, ಸಂಗಪ್ಪ, ಮಂಗಲಸಿಂಗ್, ರವಿಕುಮಾರ, ಬಸವರಾಜ, ದೇವಿಂದ್ರಪ್ಪ ಮಲ್ಲಪ್ಪ, ಹೊನ್ನಪ್ಪ, ದೇವುಜಡಿ, ಹೊನ್ನಪ್ಪ, ಮಾಳಪ್ಪ, ದೇವಪ್ಪ ಇದ್ದರು.
** *** **
ಹತ್ತಿ ಬೆಳೆಗೆ ಗುಲಾಬಿ ಕೀಟದ ಬಾಧೆ ಹೆಚ್ಚಾಗುತ್ತಿದೆ. ಬಿತ್ತನೆಗೂ ಮುನ್ನ ಕೃಷಿ ಅಧಿಕಾರಿಗಳ ಸಲಹೆ ಪಡೆಯಿದುಕೊಳ್ಳಿ.
-ಜೈರಾಮ್ ಚವಾಣ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ