ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲಗಳ ನಡುವಣ ಆಶಾಕಿರಣ

Last Updated 7 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಾಜಿ ಸ್ಪೀಕರ್ ಹಾಗೂ ಹಿರಿಯ ಮುತ್ಸದ್ಧಿ ರಮೇಶ್ ಕುಮಾರ್ ಅಧ್ಯಕ್ಷತೆಯ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವರದಿಗೆ ಪೂರಕವಾಗಿ ‘ದಿ ಕರ್ನಾಟಕ ಪಂಚಾಯತ್ ರಾಜ್ ಆಕ್ಟ್(ಅಮೆಂಡ್‌ಮೆಂಟ್) ಬಿಲ್, ೨೦೧೪’ನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪಂಚಾಯತ್ ರಾಜ್ ಕಾಯ್ದೆಯ ಹೆಸರನ್ನೇ ಬದಲಾಯಿಸಿ ‘ಕರ್ನಾಟಕ ಗ್ರಾಮ್ ಸ್ವರಾಜ್ ಪಂಚಾಯಿತಿ ರಾಜ್ ಆಕ್ಟ್-೨೦೧೪’ ಎಂದು ಮರುನಾಮಕರಣ ಮಾಡಲಾಗಿದೆ.

ಡಿಸೆಂಬರ್ ೮ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಸಭಾ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಕಾಯ್ದೆಯ ಕುರಿತ ನಿರೀಕ್ಷೆಗಳು ಹುಟ್ಟಿಕೊಂಡಿವೆ,. ಈ ಹಿಂದೆ ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರು ಗ್ರಾಮ ಪಂಚಾಯಿತಿ ಚುನಾವಣೆಗೆ ಮೊದಲೇ ಕಾಯ್ದೆ ತಿದ್ದುಪಡಿ ಮಾಡುತ್ತೇವೆ ಎನ್ನುವ ಭರವಸೆ ನೀಡಿದ್ದರು.

ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಅವರು ಕೊಟ್ಟ ಭರವಸೆಗಳು ಈಡೇರುವ ಸಾಧ್ಯತೆಗಳು ಕಡಿಮೆ ಎನ್ನುವ ಸಂಶಯ ಮೂಡಲಾರಂಭಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯಿತಿ ರಾಜ್ ಕಾಯಿದೆ-೨೦೧೪ ಸಮಗ್ರವಾಗಿ ಚರ್ಚೆಗೆ ಬರುವ ವಿಷಯ ಒತ್ತಟ್ಟಿಗಿರಲಿ ಸಮಿತಿಯ ವರದಿಯೇ ಶೈತ್ಯಾಗಾರಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಲಾರಂಭಿಸಿವೆ. ಈ ಮಾತುಗಳನ್ನು ಸಮರ್ಥಿಸುವ ಕೆಲವು ಘಟನೆಗಳೂ ನಡೆದಿವೆ.

ಮೊದಲನೆಯದಾಗಿ, ಈ ಸಮಿತಿಯ ಸದಸ್ಯರಾದ  ಎಫ್.ಎಸ್ ಜಕ್ಕಪ್ಪನವರ್,  ಟಿ ಜನಾರ್ದನ್,  ಶಾಂತವ್ವ ಗುಜ್ಜಳ ಮತ್ತು ಸುಶೀಲ್‌ಕುಮಾರ್ ಬೆಳಗಲಿ ಅವರುಗಳು 2014ರ ಅಕ್ಟೋಬರ್ 30ರಂದು ಸಮಿತಿಯ ಅಧ್ಯಕ್ಷರಿಗೆ 8 ಅಂಶಗಳನ್ನೊಳಗೊಂಡ ಪತ್ರವನ್ನು ನೀಡಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಈ ಎಂಟು ಅಂಶಗಳ ಪೈಕಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಹುದ್ದೆಗೆ ನೇರ ಚುನಾವಣೆ ಆಗಬೇಕು ಎನ್ನುವುದು ಪ್ರಮುಖ­ವಾಗಿದೆ.

ಜೊತೆಗೆ ಈಗಿರುವ ಗ್ರಾಮ ಪಂಚಾಯಿತಿಗಳ ಗಾತ್ರವನ್ನು ಇನ್ನಷ್ಟು ಚಿಕ್ಕದು ಮಾಡಿ ಹೆಚ್ಚಿನ ಸಂಖ್ಯೆಯ ಗ್ರಾಮ ಪಂಚಾಯಿತಿಗಳನ್ನು ಸೃಷ್ಟಿಸಬೇಕು ಎನ್ನುವುದು ಇವರ ಅಭಿಪ್ರಾಯವಾಗಿದೆ. ಇವರ ವಿರೋಧ ಯಾರದೋ ನಿರ್ದೇಶನಕ್ಕನುಗುಣವಾಗಿ ದಾಖಲಾಗಿದೆ ಎನ್ನುವ ಸಂಶಯ ಮೂಡುತ್ತದೆ. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳು ಖಂಡಿತ­ವಾಗಿಯೂ ಕೆಲಸ ಮಾಡಿರುತ್ತವೆ.

ರಮೇಶ್ ಕುಮಾರ್ ಸಮಿತಿಯ ವರದಿಯನ್ನು ಜಾರಿಗೆ ತಂದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಲಾಭ ಆಗಬಹುದು ಎಂಬ ಲೆಕ್ಕಾಚಾರಗಳು ಕೂಡಾ ಆರಂಭವಾಗಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯದಲ್ಲಿ ಪ್ರಜಾ­ಪ್ರಭುತ್ವದ ಆಶಯಗಳು ಮತ್ತು ಅಧಿಕಾರ ವಿಕೇಂದ್ರೀಕರಣದ ಸತ್ವ ಜನರಿಗೆ ತಲುಪ­ಬೇಕಾದರೆ ಪಂಚಾಯಿತಿ ರಾಜ್ ಸಂಸ್ಥೆಗಳು ಗಟ್ಟಿಯಾಗಲೇ ಬೇಕು. ಈ ಹಿನ್ನೆಲೆ­ಯಲ್ಲಿ ರಮೇಶ್ ಕುಮಾರ್ ಸಮಿತಿಯ ವರದಿಯನ್ನು ಜಾರಿಗೊಳಿಸುವ ಅಗತ್ಯವಿದೆ.

ಸುಧಾರಣೆಯ ಗೊಂದಲ: ಕಾಯ್ದೆ  ತಿದ್ದುಪಡಿ ಸಮಿತಿ ಮೊದಲಿಗೆ ತಿದ್ದುಪಡಿಯ ವಿಚಾರವನ್ನೇ ಮರೆತು ಹೊಸ ಕಾಯ್ದೆಯನ್ನು ರೂಪಿಸಲು ಹೊರಟು ಅದರ ಮೇಲೆಯೇ ಹೆಚ್ಚಿನ ಸಮಯ ವ್ಯಯಿಸಿತು. ಹೊಸತೊಂದು ಕಾಯ್ದೆ ರೂಪಿಸಿದರೆ ಅದನ್ನು ಜಾರಿಗೆ ತರುವುದು ಕಷ್ಟ ಎಂದು ಅರ್ಥವಾದ ಮೇಲೆ ತಿದ್ದುಪಡಿ ಸಾಧ್ಯತೆಯನ್ನು ಕೈಗೆತ್ತಿಕೊಂಡಿತು. ಈ ಗೊಂದಲದಲ್ಲಿ ಸಮಿತಿಯ ಎಲ್ಲಾ ಸದಸ್ಯರು ವರದಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಪೂರ್ಣ ಪಾಲ್ಗೊಳ್ಳಲು ಆಗಲಿಲ್ಲ ಇದರಿಂದಾಗಿ ನಾಲ್ಕೈದು ಸದಸ್ಯರ ಮೇಲೆ ಹೆಚ್ಚಿನ ಒತ್ತಡ ಬೀಳುವಂತಾಯಿತು.

ವರದಿಯ ಕರಡನ್ನು ಸಿದ್ದಪಡಿಸಲು ಸ್ವಯಂ ಸೇವಾ ಸಂಸ್ಥೆಯೊಂದರ ಮೇಲೆ ಅವಲಂಬಿಸುವ ಸ್ಥಿತಿ ನಿರ್ಮಾಣವಾಯಿತು. ಪರಿಣಾಮವಾಗಿಯೇ ಕೆಲವು ಅಪ್ರಾಯೋಗಿಕ ಸಲಹೆಗಳು ಸೇರ್ಪಡೆಯಾದವು ಎಂಬ ಮಾತೂ ಕೇಳಿಬರುತ್ತಿದೆ.
ಪಂಚಾಯತ್ ರಾಜ್‌ ಸಂಸ್ಥೆಗಳ ಸಾಮರ್ಥ್ಯಾಭಿವೃದ್ಧಿಗೆ ಸಂಬಂಧಿಸಿದ ವಿಚಾರದಲ್ಲಿ ಈ ಗೊಂದಲಗಳು ಹೆಚ್ಚು ಸ್ಪಷ್ಟವಾಗಿವೆ. ಸರ್ಕಾರಿ ಸ್ವಾಮ್ಯದ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈಗಾಗಲೇ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡುತ್ತಿದೆ.

ಈ ತರಬೇತಿಗಳು ಸಮರ್ಪಕವಾಗಿಲ್ಲ ಎಂದು ವರದಿ ಹೇಳುತ್ತದೆಯಷ್ಟೇ ಅಲ್ಲದೆ ಸಾಮರ್ಥ್ಯಾಭಿವೃದ್ಧಿ ಗಾಗಿ ಬಿಡುಗಡೆ ಮಾಡುವ ಹಣವನ್ನು ನೇರವಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗೇ ನೀಡಬೇಕು ಎನ್ನುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್‌ಐಆರ್‌ಡಿ (ಗ್ರಾಮೀಣಾಭಿವೃದ್ಧಿಯ ರಾಜ್ಯ ಸಂಸ್ಥೆಗಳು) ಸಂಸ್ಥೆಗಳ ಉನ್ನತೀಕರಣಕ್ಕೆ ಹೆಚ್ಚಿನ ಗಮನ ನೀಡಿವೆ. ಕರ್ನಾಟಕ ಸರ್ಕಾರ ಮೈಸೂರಿನ ಅಬ್ದುಲ್ ನಜೀರ್ ಸಾಬ್ ಸಂಸ್ಥೆಯ ೪ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸಲು ತೀರ್ಮಾ­ನಿಸಿದೆ. ಹೀಗಿರುವಾಗ ಸಾಮರ್ಥ್ಯಾಭಿವೃದ್ಧಿ ಅನುದಾನವನ್ನು ನೇರವಾಗಿ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕು ಎಂಬ ಶಿಫಾರಸು ವಿಚಿತ್ರವಾಗಿ ಕಾಣಿಸುತ್ತದೆ.

ಗ್ರಾಮ ಸಭೆಗಳ ಸಬಲೀಕರಣಕ್ಕೆ ಸಮಿತಿಯ ವರದಿಯಲ್ಲಿ ಗಮನವನ್ನು ನೀಡಲಾಗಿದೆ  ಎಂಬುದು ಸರಿ. ಗ್ರಾಮ ಸಭೆಗೆ ಕೆಲವು ವಿಶೇಷ ಅಧಿಕಾರ ಮತ್ತು ಹೊಣೆಗಾರಿಕೆಗಳನ್ನು ತಿದ್ದುಪಡಿಯ ಮೂಲಕ ನೀಡಲು ಉದ್ದೇಶಿಸಲಾಗಿದೆ. ಆದರೆ ವಿರೋದಾಭಾಸದ ಕೆಲವು ಸಂಗತಿಗಳು ಕೂಡಾ ಸೇರಿಕೊಂಡಿವೆ. ಈ ಹಿಂದೆ ಕರ್ನಾಟಕದ ಗ್ರಾಮ ಪಂಚಾಯಿತಿಗಳು ವರ್ಷಕ್ಕೆ ನಾಲ್ಕರಿಂದ ಆರು ಬಾರಿ ಗ್ರಾಮ ಸಭೆಗಳು ಮತ್ತು ಅಷ್ಟೇ ಬಾರಿ ಅನಿವಾರ್ಯವಾಗಿ ವಾರ್ಡ್ ಸಭೆಗಳನ್ನು ಕೂಡಾ ನಡೆಸಬೇಕಾದ ಸ್ಥಿತಿ ಇತ್ತು.

ಪದೇ ಪದೇ ನಡೆಸಬೇಕಾದ ಈ ಕಾಟಾಚಾರದ ಸಭೆಗಳ ಮೇಲೆ ಜನ ನಂಬಿಕೆಗಳನ್ನು ಕಳೆದುಕೊಂಡಿದ್ದರು. ಇದೀಗ ವಾರ್ಡ್ ಮತ್ತು ಗ್ರಾಮ ಸಭೆಗಳ ಜೊತೆಗೆ ವಸತಿ ಸಭೆ ನಡೆಸುವುದನ್ನು ತಿದ್ದುಪಡಿ ಕಡ್ಡಾಯಗೊಳಿಸುತ್ತದೆ. ಇದರಿಂದ ಒಂದು ಗ್ರಾಮ ಪಂಚಾಯಿತಿಯಲ್ಲಿ ಒಂದು ಗ್ರಾಮ ಸಭೆಗೆ ಮುಂಚಿತವಾಗಿ ೧೦ರಿಂದ ೧೫ ವಸತಿ ಸಭೆಗಳು, ೫ರಿಂದ ೮ ವಾರ್ಡ್ ಸಭೆಗಳನ್ನು ಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ವರ್ಷದಲ್ಲಿ ೨ ಬಾರಿ ನಡೆಯಬೇಕು.

ಮಾತ್ರವಲ್ಲದೆ ಹೆಚ್ಚುವರಿಯಾಗಿ ಮಹಿಳಾ ಗ್ರಾಮ ಸಭೆ, ಮಕ್ಕಳ ಗ್ರಾಮ ಸಭೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಗ್ರಾಮ ಸಭೆ, ವಿಕಲಚೇತನರು, ವೃದ್ಧರು, ವಿಧವೆಯರು ಮುಂತಾದ ಜನರ ವಿಶೇಷ ಗ್ರಾಮ ಸಭೆಗಳನ್ನು ಕೂಡಾ ಕಡ್ಡಾಯವಾಗಿ ಮಾಡಬೇಕು. ಇದೆಲ್ಲವನ್ನು ಲೆಕ್ಕ ಹಾಕಿದರೆ ಸುಮಾರು ೧೫,೦೦೦ ಜನಸಂಖ್ಯೆಯಿರುವ ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದಲ್ಲಿ ೨೦೦ರಿಂದ ೨೫೦ ಸಭೆಗಳನ್ನು ಮಾಡಬೇಕು! ವರ್ಷವಿಡೀ ನಿರಂತರ ಸಭೆಗಳು. ಗ್ರಾಮ ಪಂಚಾಯಿತಿ ಬೇರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸುವುದಾದರೂ ಹೇಗೆ?

ಈ ರೀತಿಯ ಅನೇಕ ಅಸಂಗತವೆನಿಸುವಂಥ ವಿಚಾರಗಳು ವರದಿಯಲ್ಲಿದ್ದರೂ ಅದು ಒಟ್ಟಾರೆಯಾಗಿ ತೆಗೆದುಕೊಂಡಿರುವ ನಿಲುವು ಮತ್ತು ಮುಂದಿಡಲು ಪ್ರಯತ್ನಿಸುತ್ತಿರುವ ಹೆಜ್ಜೆ ಧನಾತ್ಮಕವಾದುದು. ಈ ತಿದ್ದುಪಡಿ ಮಸೂದೆ ಸದನದಲ್ಲಿ ಮಂಡನೆಯಾಗಿ ವಿಸ್ತೃತ ಚರ್ಚೆ ನಡೆದಾಗ ಈ ಬಗೆಯ ಅಸಂಗತಗಳು ಪರಿಹಾರವಾಗುತ್ತವೆ. ಅಧಿಕಾರ ವಿಕೇಂದ್ರೀಕರಣ ವನ್ನು ದುರ್ಬಲಗೊಳಿಸುವ ಅಥವಾ ಅನಪೇಕ್ಷಿತವಾಗಿರುವ ಶಿಫಾರಸುಗಳನ್ನು ಕೈಬಿಡುವ ವಿವೇಚನೆಯನ್ನು ನಮ್ಮ ಶಾಸನ ಸಭೆಯ ಸದಸ್ಯರು ತೋರಿಸಬೇಕು. ಇದು ಸಾಧ್ಯವಾದಾಗ ಮಾತ್ರ ಕರ್ನಾಟಕದ ಪಂಚಾಯಿತಿ ರಾಜ್ ವ್ಯವಸ್ಥೆ ತನ್ನ ಹಿಂದಿನ ಘನತೆ ಮತ್ತು ಗೌರವವನ್ನು ಮರಳಿ ಪಡೆಯುತ್ತದೆ.

(ಲೇಖಕರು ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಭಿವೃದ್ಧಿ ಸಂಸ್ಥೆಯಲ್ಲಿ ಸಲಹೆಗಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT