ಚೆನ್ನೈ (ಪಿಟಿಐ): ಖಾಸಗಿ ಉಗ್ರಾಣ ಕಂಪೆನಿಯ ಆವರಣ ಗೋಡೆ ಗುಡಿಸಲುಗಳ ಮೇಲೆ ಕುಸಿದು, 11 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಉಪ್ಪಾರಪಾಳ್ಯಂ ಎಂಬಲ್ಲಿ ನಡೆದಿದೆ.
ಶನಿವಾರ ರಾತ್ರಿ ಈ ಅವಘಡ ಸಂಭವಿಸಿದ್ದು, ಮೃತರ ಪೈಕಿ ಮಗು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಕಟ್ಟಡ ಕಾರ್ಮಿಕರಾಗಿದ್ದು, ಒಂಬತ್ತು ಮಂದಿ ಆಂಧ್ರಪ್ರದೇಶದವರಾಗಿದ್ದಾರೆ.
‘ಘಟನೆಗೆ ಸಂಬಂಧಿಸಿದಂತೆ, ಉಗ್ರಾಣದ ಮಾಲೀಕರಾದ ರಾಮನಾಥನ್ ಮತ್ತು ಅವರ ಸಹೋದರ ಬಾಲು ಅವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರವಣನ್ ತಿಳಿಸಿದ್ದಾರೆ.
‘ಕುಸಿದ ಕಾಂಪೌಂಡ್ನ ಅವಶೇಷಗಳಡಿ ಸಿಲುಕಿದ್ದ ನಾಗರಾಜ್ ಎಂಬಾತನನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳನ್ನು ಕಳುಹಿಸಲು ನಾಯ್ಡು ಸೂಚನೆ: ಘಟನೆಯಲ್ಲಿ ಆಂಧ್ರದ 9 ಮಂದಿ ಮೃತಪಟ್ಟಿರುವುದರ ಕುರಿತು ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ದು, ಘಟನಾ ಸ್ಥಳದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ಕಳುಹಿಸುವಂತೆ ನೆಲ್ಲೂರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಪರಿಹಾರ ಘೋಷಣೆ: ಮೃತಪಟ್ಟವರ ಕುಟುಂಬದ ಸಂಬಂಧಿಗಳಿಗೆ ಮುಖ್ಯಮಂತ್ರಿ ಜಯಲಲಿತಾ ತಲಾ ರೂ. 2 ಲಕ್ಷ ಹಾಗೂ ಗಾಯಗೊಂಡವರಿಗೆ ರೂ. 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.