ಜಮ್ಮು (ಐಎಎನ್ಎಸ್): ಜಮ್ಮು–ಕಾಶ್ಮೀರದಲ್ಲಿ ಗೋವಧೆ ಮತ್ತು ಗೋಮಾಂಸ ಮಾರಾಟವನ್ನು ಹೈಕೋರ್ಟ್ ನಿಷೇಧಿಸಿದ್ದನ್ನು ಖಂಡಿಸಿ ಗೋಮಾಂಸದ ಊಟ ಏರ್ಪಡಿಸಿದ್ದ ಪಕ್ಷೇತರ ಶಾಸಕ ಎಂಜಿನಿಯರ್ ರಷೀದ್ ವಿರುದ್ಧ ಶನಿವಾರ ಜಮ್ಮು–ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ (ಜೆಕೆಎನ್ಪಿಪಿ) ಬೃಹತ್ ಪ್ರತಿಭಟನೆ ನಡೆಸಿತು.
ಜೆಕೆಎನ್ಪಿಪಿ ಕರೆ ನೀಡಿದ ರಾಜ್ಯವ್ಯಾಪಿ ಬಂದ್ನಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿತು. ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾಕಾರರು ಬಲವಂತವಾಗಿ ಮುಚ್ಚಿಸಿದರು. ಸಾರಿಗೆ, ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜುಗಳು ಸ್ಥಗಿತಗೊಂಡಿದ್ದವು. ಬ್ಯಾಂಕುಗಳಲ್ಲಿ ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಇದ್ದರು.
ಗೋಮಾಂಸ ನಿಷೇಧ ವಿರೋಧಿಸಿ ಎಂಜಿನಿಯರ್ ರಷೀದ್ ಅವರು ಶ್ರೀನಗರದಲ್ಲಿರುವ ಶಾಸಕರ ಭವನದಲ್ಲಿ ಬುಧವಾರ ಗೋಮಾಂಸ ಭೋಜನ ಕೂಟ ಏರ್ಪಡಿಸಿದ್ದರು. ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಅವರ ಮೇಲೆ ಹಲ್ಲೆ ಮಾಡಿದ್ದರು.