ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋವಿಂದರಾಜುಗೆ ಜಾಮೀನು ಮಂಜೂರು ಮಾಡಿದ್ದ ಆದೇಶವನ್ನು ಹೈಕೋರ್ಟ್ ಕಾಯಂಗೊಳಿಸಿದೆ.
ಗೋವಿಂದರಾಜುಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸರ್ಕಾರಿ ವಕೀಲರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ನಡೆಸಿತು.
ಈ ಅರ್ಜಿಯನ್ನು ನ್ಯಾಯಪೀಠವು ವಜಾಗೊಳಿಸಿ ಆದೇಶಿಸಿತಲ್ಲದೆ, ‘ಅಂಕಗಣಿತ ದೋಷಗಳ ತಿದ್ದುಪಡಿಯ ಹೊರತಾಗಿ ಒಮ್ಮೆ ನೀಡಿದ ಆದೇಶವನ್ನು ಹಿಂಪಡೆಯುವುದಕ್ಕೆ ಕೋರ್ಟ್ಗೆ ಅಧಿಕಾರವಿಲ್ಲ’ ಎಂದು ಆದೇಶದಲ್ಲಿ ತಿಳಿಸಿದೆ.
‘ಅಷ್ಟಕ್ಕೂ ಈ ಮಧ್ಯಂತರ ಅರ್ಜಿಯನ್ನು ಸರ್ಕಾರಿ ವಕೀಲರು ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್ ವತಿಯಿಂದ ಸಲ್ಲಿಸಲಾಗಿಲ್ಲ’ ಎಂದು ಪೀಠವು ವಿವರಿಸಿದೆ. ಇದೇ ನ್ಯಾಯಪೀಠವು ಗೋವಿಂದರಾಜುಗೆ 2015ರ ಜುಲೈನಲ್ಲಿ ಜಾಮೀನು ಮಂಜೂರು ಮಾಡಿತ್ತು.