ಮಾಗಡಿ: ಹಿರಿಯ ಸಮಾಜವಾದಿ ನಾಯಕ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಗ್ರಾ.ಪಂ. ಗಳಲ್ಲಿಯೇ ರೈತರ ಭೂಮಿಯ ಪಹಣಿ ವಿತರಿಸುವ ಯೋಜನೆ ಜಾರಿಗೆ ತಂದಿರುವುದು ರೈತರ ಪಾಲಿಗೆ ವರದಾನವಾಗಲಿದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ತಿಪ್ಪಸಂದ್ರ ಗ್ರಾ.ಪಂ ಆವರಣದಲ್ಲಿ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ಪಹಣಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಮ್ಮ ಪಿತ್ರಾರ್ಜಿತ ಭೂಮಿ ಪಹಣಿ ಪಡೆಯಲು ರೈತರು ಇನ್ನಿಲ್ಲದ ಕಷ್ಟ ಅನುಭವಿಸಬೇಕಾಗಿತ್ತು. ತಾಲ್ಲೂಕು ಕಚೇರಿಗೆ ಅಲೆದು ಸಮಯ ವ್ಯರ್ಥ ಮಾಡಬೇಕಿತ್ತು. ಈಗ ಸರಕಾರ ಗ್ರಾಮ ಪಂಚಾಯತಿಯಲ್ಲಿಯೇ ಪಹಣಿ ಪಡೆಯುವ ಸೌಲಭ್ಯ ನೀಡಿದೆ ಎಂದರು.
ಜಿಲ್ಲಾಪಂಚಾಯತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್ ಮಾತನಾಡಿ, ಸಕಾಲದ ಅಡಿಯಲ್ಲಿ ನೀಡಲಾಗುತ್ತಿದ್ದ 100 ಸೇವೆಗಳನ್ನು ಗ್ರಾಮ ಪಂಚಾಯತಿ ಯಲ್ಲಿಯೇ ಪಡೆಯಬಹುದಾಗಿದೆ. ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಯಗಳ ಅನುಷ್ಠಾನಕ್ಕೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು .
ತಾ.ಪಂ.ಅಧ್ಯಕ್ಷ ಸುರೇಶ್, ತಹಶೀಲ್ದಾರ್ ಸಿ.ಎಚ್.ಶಿವಕುಮಾರ್ ಮಾತನಾಡಿದರು. ಗ್ರಾ,ಪಂ.ಅಧ್ಯಕ್ಷೆ ತಾರಾಮಣಿ ರಾಮಣ್ಣ ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಯ್ಯ, ತಾಲ್ಲೂಕು ಪಂಚಾಯತಿ ಸದಸ್ಯ ಶಿವರಾಜು , ಗ್ರಾಮಪಂಚಾಯತಿ ಸದಸ್ಯರಾದ ನಾಗಪ್ಪ , ಟಿ.ವಿರಘು, ಪ್ರಕಾಶ್, ಗೊರವನಪಾಳ್ಯ ಹರೀಶ್, ಪಾಳ್ಯದಹಳ್ಳಿ ರಾಮೇಗೌಡ , ಪೋಲೀಸ್ ರಾಮಣ್ಣ , ರಮೇಶ್ ಇದ್ದರು.