ಗ್ರಾಮೀಣ ಕಸುಬುಗಳನ್ನು ಜಾತಿಗಳೆಂದು ಗುರುತಿಸಬೇಕಾಗಿ ಬಂದಿರುವುದು ಒಂದು ದುರಂತವೇ ಸರಿ. ಮತ್ತೂ ದೊಡ್ಡ ದುರಂತವೆಂದರೆ, ಹಾಗೆಯೇ ಗುರುತಿಸಬೇಕೆಂದು ಹಟ ಹಿಡಿಯುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು. ಇವರದ್ದು ಅದೆಂತಹ ಅತಿರೇಕವೆಂದರೆ, ಚಪ್ಪಲಿ ಹೊಲೆಯುವವನು ಚಮ್ಮಾರ ಜಾತಿಯಿಂದಲೇ ಬಂದಿರಬೇಕು, ನೇಕಾರಿಕೆ ಮಾಡುವವಳು ದೇವಾಂಗ ಜಾತಿಯಿಂದಲೇ ಬಂದಿರಬೇಕು ಎಂದು ಫರ್ಮಾನು ಹೊರಡಿಸುತ್ತಿದ್ದಾರೆ. ಆದರೆ, ಫರ್ಮಾನುಗಳ ಮೂಲವಿರುವುದು ಬಡ ಚಮ್ಮಾರನಲ್ಲೂ ಅಲ್ಲ ಅಥವಾ ಬಡಕುಂಬಾರನಲ್ಲೂ ಅಲ್ಲ. ಅದಿರುವುದು ಜಾತಿ ಪದ್ಧತಿಯೆಂಬ ಅನಿಷ್ಟದಲ್ಲಿ. ಜಾತಿ ಸಂಘಟನೆಗಳು, ಜಾತಿಗಳ ರಾಜಕೀಯ ಧ್ರುವೀಕರಣ ಮಾಡಹೊರಟವರು ಹಾಗೂ ವ್ಯಾಪಾರಿಗಳ ಹುನ್ನಾರವಿದು. ಗ್ರಾಮೀಣ ಕಸುಬುಗಳು ಓಬೀರಾಯನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಉಳಿದಿರಲಿ ಎಂದು ಇವರು ಬಯಸುತ್ತಿದ್ದಾರೆ. ಈ ವಿಷ ವರ್ತುಲದಿಂದಾಗಿಯೇ ಶ್ರಮಜೀವಿಗಳು ತೀವ್ರತರವಾದ ಬಡತನ ಹಾಗೂ ಶೋಷಣೆಗೆ ಗುರಿಯಾಗಿರುವುದು.
ನಾನು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಬಂದವನು. ಬುದ್ಧಿಜೀವಿ ವೃತ್ತಿಯಲ್ಲಿರಬೇಕಾದವನು. ನಾನೇಕೆ ಕೈಮಗ್ಗ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದೇನೆ? ನೇಕಾರಿಕೆಯ ವೃತ್ತಿಯೊಳಗೇಕೆ ಮೂಗುತೂರಿಸುತ್ತಿದ್ದೇನೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಬಸವಣ್ಣನೂ ಬುದ್ಧಿಜೀವಿ ಜಾತಿಯಿಂದ ಬಂದವನು. ಜಾತಿವೃತ್ತಿಯನ್ನು ತಿರಸ್ಕರಿಸಿ ಕಾಯಕವೃತ್ತಿ ಸ್ವೀಕರಿಸಿದವನು. ಬಸವಣ್ಣ ದೊಡ್ಡವನು, ನಾನು ಸಣ್ಣವನು. ಸಣ್ಣ ರೀತಿಯಲ್ಲಾದರೂ ಸರಿ, ನಾನೂ ಜನಿವಾರ ಹರಿದೊಗೆದು ಕಾಯಕವೃತ್ತಿ ಸ್ವೀಕರಿಸುವ ಪ್ರಯತ್ನ ಮಾಡಬಾರದೆ?
ನಾನು ಕೆಲಸ ಮಾಡುತ್ತಿರುವುದು ನೇಕಾರರ ಸಹಕಾರ ಸಂಘವೊಂದರಲ್ಲಿ. ‘ಚರಕ’ ಸಹಕಾರ ಸಂಘದ ನೂರಾರು ಮಹಿಳೆಯರು ಜಾತಿನೇಕಾರರಲ್ಲ. ಅವರು ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರು. ಎಲ್ಲಕ್ಕಿಂತ ಮಿಗಿಲಾಗಿ ಗ್ರಾಮೀಣ ಮಹಿಳೆಯರು. ತಿಂಗಳಿಗೆ ಇಪ್ಪತ್ತು ಸಾವಿರ ಮೀಟರು ನೈಸರ್ಗಿಕ ಬಣ್ಣದ ಕೈಮಗ್ಗಬಟ್ಟೆ ಉತ್ಪಾದಿಸಿ ಮಾರಾಟ ಮಾಡುತ್ತಿರುವವರು ಇವರು. ನೈಸರ್ಗಿಕ ಬಣ್ಣದ ಬಟ್ಟೆಯ ಉತ್ಪಾದನೆಯಲ್ಲಿ ಚರಕ ಸಹಕಾರ ಸಂಘದ್ದು ದೇಶದಲ್ಲಿಯೇ ಒಂದು ವಿಕ್ರಮವಾಗಿದೆ. ನಾವು, ಇತರೆ ಜಾತಿಗಳವರು, ನೇಕಾರಿಕೆಯ ಕಸುಬಿನೊಳಗೆ ಮೂಗು ತೂರಿಸಬಾರದೆ?
ನಾವೇಕೆ ಕೈಮಗ್ಗ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದೇವೆ ಎಂದು ಹೇಳಲೇಬೇಕಾದ ಅಗತ್ಯ ಬಂದಿದೆ ಇಂದು. ನಾವು ಉತ್ಪಾದಿಸುತ್ತಿರುವ ಅಪ್ಪಟ ಕೈಮಗ್ಗ ಬಟ್ಟೆ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವಿದ್ದಂತೆ. ಕೈಮಗ್ಗ ಮಾರುಕಟ್ಟೆಯ ತುಂಬಾ ಡಾಲ್ಡಾ ಮಾದರಿಯ ಕಲಬೆರಕೆ ವಸ್ತ್ರ ತುಂಬಿಕೊಂಡಿದೆ. ನೈಜತುಪ್ಪವೆಂದೇ ಬಿಂಬಿಸಿ ಡಾಲ್ಡಾ ಮಾರಾಟ ಮಾಡಲಾಗುತ್ತಿದೆ. ಕಲಬೆರಕೆಯಿಂದಾಗಿ ನೈಜ ತುಪ್ಪದ ಬೆಲೆ ಕುಸಿದಿದೆ, ನಮ್ಮ ಹೊಟ್ಟೆ ಚುರ್ ಎನ್ನುತ್ತಿದೆ. ನಮ್ಮ ಹೊಟ್ಟೆ ಚುರುಗುಡುತ್ತಿದೆ ಎಂದು ನಾವು ಹೇಳಬಾರದೆ?
ಕೈಮಗ್ಗ ಸತ್ಯಾಗ್ರಹವು ವಿದ್ಯುತ್ಮಗ್ಗಗಳ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವಿದ್ಯುತ್ಮಗ್ಗಗಳಿಗೆ ಸಿಕ್ಕುತ್ತಿರುವ ಸಬ್ಸಿಡಿ ನಿಲ್ಲಿಸಿ ಎಂದು ನಾವು ಬೇಡಿಕೆ ಇಟ್ಟಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.
ವಿದ್ಯುತ್ಮಗ್ಗಗಳಿಗೆ ಸರ್ಕಾರದಿಂದ ಸಲ್ಲುತ್ತಿರುವ ಯಾವುದೇ ನ್ಯಾಯಯುತವಾದ ಸಹಾಯವನ್ನೂ ನಾವು ವಿರೋಧಿಸುತ್ತಿಲ್ಲ. ಮಾತ್ರವಲ್ಲ, ವಿದ್ಯುತ್ ಮಗ್ಗಗಳ ಕಾರ್ಮಿಕರ ಬೇಡಿಕೆಗಳೂ ನಮ್ಮ ಬೇಡಿಕೆಗಳೊಳಗೆ ಅಂತರ್ಗತವಾಗಿವೆ. ನೇಕಾರರ ಬೇಡಿಕೆಗಳನ್ನು ಸರ್ಕಾರವು ಒಪ್ಪಿಕೊಂಡಿದೆ. ಹೀಗಿರುವಾಗ ಜಾತಿನೇಕಾರಿಕೆಯ ಮುಖವಾಡ ಧರಿಸಿರುವ ಮಾಲೀಕ ವ್ಯಾಪಾರಿಗಳು ಒಪ್ಪಂದ ಮುರಿದು ಬೀಳಲಿ ಎಂದು ಪ್ರಯತ್ನಿಸುತ್ತಿರಬಹುದೇ ಎಂಬ ಗಾಢವಾದ ಅನುಮಾನವು ನೇಕಾರರನ್ನು ಕಾಡತೊಡಗಿದೆ.
ಸತ್ಯಾಗ್ರಹದ ಪ್ರಮುಖ ಬೇಡಿಕೆಯನ್ನೇ ತೆಗೆದುಕೊಳ್ಳಿ. ಕರ್ನಾಟಕ ಸರ್ಕಾರವು ತನ್ನ ವಿವಿಧ ಇಲಾಖೆಗಳ ಅಗತ್ಯವನ್ನು ಪೂರೈಸಲಿಕ್ಕೆಂದು ವಾರ್ಷಿಕ ಸರಿಸುಮಾರು ನಾಲ್ಕುನೂರು ಲಕ್ಷ ಮೀಟರುಗಳಷ್ಟು ವಸ್ತ್ರವನ್ನು ಖರೀದಿ ಮಾಡುತ್ತಿದೆ. ಹೆಚ್ಚೂ ಕಡಿಮೆ ಇಷ್ಟೂ ವಸ್ತ್ರವನ್ನೂ ಅದು ದಲ್ಲಾಳಿಗಳ ಮೂಲಕ ಹೊರರಾಜ್ಯಗಳಿಂದ ಖರೀದಿ ಮಾಡುತ್ತಿದೆ. ನಮ್ಮ ರಾಜ್ಯದ ನೇಕಾರರೇ (ಕೈಮಗ್ಗ ಮತ್ತು ವಿದ್ಯುತ್ಮಗ್ಗ) ಈ ಎಲ್ಲ ವಸ್ತ್ರವನ್ನೂ ಪೂರೈಸುವಂತಾಗಲಿ, ಏಕಗವಾಕ್ಷಿ ಪದ್ಧತಿಯಿಂದ ವಸ್ತ್ರಖರೀದಿ ಪಾರದರ್ಶಕ ನೀತಿ ಜಾರಿಗೆ ಬರಲಿ ಎಂದು ನಾವಿಟ್ಟಿದ್ದ ಬೇಡಿಕೆಯನ್ನು ಸರ್ಕಾರ ಮಾನ್ಯ ಮಾಡಿದೆ. ಇದು ಸಾಧ್ಯವಾದರೆ, ಕರ್ನಾಟಕದ ಎಲ್ಲ ನೇಕಾರರು - ವಿದ್ಯುತ್ ಮಗ್ಗವಿರಲಿ, ಕೈಮಗ್ಗವಿರಲಿ, ಬದುಕಿಕೊಳ್ಳುತ್ತಾರೆ.
ಕೈಮಗ್ಗ ಸತ್ಯಾಗ್ರಹವು ಒಂದು ಅಖಿಲ ಭಾರತ ಚಳವಳಿಯಾಗಿದೆ, ಎಲ್ಲ ನೇಕಾರರು ಹಾಗೂ ಗ್ರಾಹಕರ ಚಳವಳಿಯಾಗಿದೆ. ನೀವೂ ಬನ್ನಿ, ನಿಮ್ಮ ಸಮಸ್ಯೆಗಳನ್ನೂ ಸರ್ಕಾರದ ಮುಂದಿಡಿ, ನಿಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ಕೈಮಗ್ಗ ಸತ್ಯಾಗ್ರಹವು ನಿಮ್ಮ ಜೊತೆಗಿರುತ್ತದೆ ಎಂದು ಮಾಲೀಕ ವ್ಯಾಪಾರಿಗಳಿಗೆ ಈ ಮೂಲಕ ಕಳಕಳಿಯ ಮನವಿ ಮಾಡಲು ನಾನು ಬಯಸುತ್ತೇನೆ. ಮತ್ತೂ ಒಂದು ಮಾತನ್ನು ಇಲ್ಲಿ ಹೇಳಲು ಬಯಸುತ್ತೇನೆ. ಒಂದೊಮ್ಮೆ ನನ್ನ ‘ತಲೆದಂಡ’ದಿಂದಲೇ ನೇಕಾರರಸಮಸ್ಯೆ ಪರಿಹಾರವಾಗುವುದಾದರೆ ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ನಮ್ರವಾಗಿ ಸೂಚಿಸಬಯಸುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.