ಬೆಂಗಳೂರು: ಗಣೇಶ ಉತ್ಸವಕ್ಕೆ ಕೇಳಿದಷ್ಟು ಚಂದಾ ಹಣ ನೀಡದ ಕಾರಣಕ್ಕೆ ಹಿರಿಯ ವಿದ್ಯಾರ್ಥಿಗಳು ಸ್ಥಳೀಯ ಯುವಕರ ಜತೆ ಸೇರಿ ಪ್ರಥಮ ಪಿಯುಸಿ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿರುವ ಘಟನೆ ವರ್ತೂರಿನಲ್ಲಿ ಮಂಗಳವಾರ ನಡೆದಿದೆ.
ವೈಟ್ಫೀಲ್ಡ್ ಸಮೀಪದ ವಿಜಯನಗರ ನಿವಾಸಿ ತ್ಯಾಗರಾಜ್ ಬಾಬು ಎಂಬುವರ ಮಗ ಕಾರ್ತಿಕ್ ಹಲ್ಲೆಗೊಳಗಾದವನು. ಆತನ ಕಣ್ಣು, ಕೈ–ಕಾಲುಗಳು ಹಾಗೂ ಹೊಟ್ಟೆ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಸದ್ಯ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
‘ವರ್ತೂರು ಮುಖ್ಯರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ತಿಕ್, ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋಗಿದ್ದ. ಈ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯುವಕರು ಆತನ ಬಳಿ ಗಣೇಶ ಮೂರ್ತಿ ವಿಸರ್ಜನೆಗೆ ಹಣ ನೀಡುವಂತೆ ಕೇಳಿದ್ದಾರೆ. ಆಗ ಕಾರ್ತಿಕ್, ತನ್ನ ಬಳಿ ಇದ್ದ ₨ 100ನ್ನು ಅವರಿಗೆ ಕೊಟ್ಟಿದ್ದಾನೆ. ಆದರೆ, ₨ 500 ಕೊಡುವಂತೆ ಒತ್ತಾಯಿಸಿ ಜಗಳ ಆರಂಭಿಸಿದ ಯುವಕರ ಗುಂಪು, ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ’ ಎಂದು ಕಾರ್ತಿಕ್ ಚಿಕ್ಕಪ್ಪ ಆರೋಗ್ಯನಾದನ್ ಹೇಳಿದರು.
‘ಸುಮಾರು 15 ಮಂದಿಯ ಗುಂಪು ಕಾರ್ತಿಕ್ನ ಬಟ್ಟೆ ಬಿಚ್ಚಿ, ಕಾಲಿನಿಂದ ಒದ್ದಿದ್ದಾರೆ. ಆ ಗುಂಪಿನಲ್ಲಿದ್ದ ಹಿರಿಯ ವಿದ್ಯಾರ್ಥಿಗಳ ಹೆಸರುಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಆಡಳಿತ ಮಂಡಳಿ, ಅವರನ್ನು ರಕ್ಷಿಸಲು ಮುಂದಾಗಿದೆ’ ಎಂದು ಆರೋಪಿಸಿದರು.
‘ಕಾರ್ತಿಕ್ಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಶಿಕ್ಷಕರು, ನಂತರ ಪೋಷಕರಿಗೆ ವಿಷಯ ತಿಳಿಸದಂತೆ ಎಚ್ಚರಿಕೆ ನೀಡಿದ್ದರು. ಸಂಜೆ 6 ಗಂಟೆಗೆ ತಂದೆ ಮನೆಗೆ ಬರುತ್ತಿದ್ದಂತೆಯೇ ಕಾರ್ತಿಕ್, ನಡೆದ ಘಟನೆಯನ್ನು ವಿವರಿಸಿದ್ದಾನೆ. ಕೂಡಲೇ ಅವರು ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಅವರು ಹೇಳಿದರು.
ಘಟನೆ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ತ್ಯಾಗರಾಜ್ ಬಾಬು, ‘ಮಗನ ವಿರುದ್ಧ ಹಲ್ಲೆ ನಡೆಸಿದವರ ವಿರುದ್ಧ ಹಾಗೂ ವಿಷಯ ಬಹಿರಂಗಪಡಿಸದಂತೆ ಮಗನಿಗೆ ಬೆದರಿಸಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರ್ತೂರು ಠಾಣೆಗೆ ದೂರು ದಾಖಲಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.