ರಾಜ್ಯ ಸರ್ಕಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಚತುಷ್ಪಥ ರಸ್ತೆಯನ್ನು ನಿರ್ಮಿಸಲು ಮುಂದಾಗಿದೆ. ಈ ಬೆಟ್ಟ ಮೂಲತಃ ಹಲವಾರು ಜೀವರಾಶಿಗಳಿಗೆ ಆಶ್ರಯತಾಣವಾಗಿದೆ. ಅಭಿವೃದ್ಧಿಯ ನೆಪದಲ್ಲಿ, ಮೋಜಿನ ಹೆಸರಿನಲ್ಲಿ ಇಲ್ಲಿ ಅದಾಗಲೇ ರೋಪ್ವೇ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ. ಇದರ ಅನುಷ್ಠಾನ ಪರಿಸರವಾದಿಗಳ ದೃಷ್ಟಿಯಲ್ಲಿ, ಪ್ರಕೃತಿಮಾತೆಯ ಮೇಲೆ ನಡೆಯಲಿರುವ ಸಾಮೂಹಿಕ ಅತ್ಯಾಚಾರವಲ್ಲದೆ ಬೇರೇನೂ ಅಲ್ಲ. ಇಂತಹ ಕೃತ್ಯದ ಮುಂದುವರಿದ ಭಾಗವೇ ಚತುಷ್ಪಥ ರಸ್ತೆ ನಿರ್ಮಾಣ.
ಈ ಬಗೆಯ ನಿರ್ಮಾಣಗಳು ಮುಂಬರುವ ವರ್ಷಗಳಲ್ಲಿ ಮೈಸೂರು ನಗರದ ತಾಪಮಾನದ ದಾಖಲೆಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಕೇರಳದ ಶಬರಿಮಲೆಯಲ್ಲಿ ಚತುಷ್ಪಥ ರಸ್ತೆಯನ್ನು ನಿರ್ಮಿಸಿಲ್ಲ ಏಕೆ? ಅಲ್ಲಿ ನೆರೆಯುವ ಭಕ್ತರಿಗಿಂತಲೂ ಚಾಮುಂಡಿಬೆಟ್ಟದಲ್ಲಿ ಹೆಚ್ಚು ಜನ ನೆರೆಯುವರೇ?
ಚಾಮುಂಡಿ ಬೆಟ್ಟ ದೈವಿಕ ಭಾವನೆಯ ಪ್ರತೀಕ. ಇದನ್ನು ನಾವು ವ್ಯವಹಾರದ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ಈಗಿರುವ ರಸ್ತೆಯನ್ನೇ ಬಳಸಿಕೊಂಡರೆ ಸಾಕು. ಜೊತೆಗೆ ಈ ಬೆಟ್ಟವು ಮೈಸೂರಿನ ಸೊಬಗಿಗೆ ಪ್ರಕೃತಿಯೇ ನಿರ್ಮಿಸಿರುವ ಅತ್ಯದ್ಭುತ ಹಿನ್ನೆಲೆ ನೋಟ. ಈ ಹಿನ್ನೆಲೆಯಲ್ಲಿ ಸರ್ಕಾರ ಚತುಷ್ಪಥ ಯೋಜನೆಯನ್ನು ಕೈ ಬಿಡಬೇಕು.
-ನರಸಿಂಹ ಮೂರ್ತಿ,
ಮೈಸೂರು