ನವದೆಹಲಿ (ಪಿಟಿಐ): ಗುಜರಾತ್ನಲ್ಲಿ ನಡೆದಿದ್ದ ದಲಿತರ ಮೇಲಿನ ಹಲ್ಲೆ ಪ್ರಕರಣದ ಚರ್ಚೆ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿದ್ದೆಗೆ ಜಾರಿದ ಘಟನೆ ಲೋಕಸಭೆಯಲ್ಲಿ ಬುಧವಾರ ನಡೆದಿದೆ.
ಬಿಜೆಪಿ ಮತ್ತು ಬಿಎಸ್ಪಿ ರಾಹುಲ್ ಅವರನ್ನು ಟೀಕಿಸಿದ್ದು, ‘ದಲಿತರ ವಿಷಯದಲ್ಲಿ ರಾಹುಲ್ ಎಷ್ಟು ಗಂಭೀರವಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ’ ಎಂದಿವೆ.
ಆದರೆ ಕಾಂಗ್ರೆಸ್ ಪಕ್ಷ ತನ್ನ ಉಪಾಧ್ಯಕ್ಷನ ಬೆಂಬಲಕ್ಕೆ ನಿಂತಿದ್ದು, ರಾಹುಲ್ ತಮ್ಮ ಮೊಬೈಲ್ ಫೋನ್ ನೋಡುತ್ತಿದ್ದರು ಎಂದು ಹೇಳಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ಕುರಿತ ಚರ್ಚೆಯ ಬಳಿಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉತ್ತರಿಸುತ್ತಿದ್ದಾಗ ರಾಹುಲ್ ನಿದ್ದೆ ಮಾಡುತ್ತಿರುವ ದೃಶ್ಯವನ್ನು ಲೋಕಸಭಾ ಟಿ.ವಿ ಪ್ರಸಾರ ಮಾಡಿದೆ.
‘ಸಂತ್ರಸ್ತ ದಲಿತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶ ರಾಹುಲ್ಗೆ ಇಲ್ಲ. ರಾಜಕೀಯ ಮಾಡಲು ಮಾತ್ರ ಬಯಸುತ್ತಾರೆ. ದಲಿತರಿಗೆ ನ್ಯಾಯ ದೊರಕಿಸಿಕೊಡುವ ಆಸಕ್ತಿಯಿದ್ದಲ್ಲಿ ಅವರು ನಿದ್ರಿಸುತ್ತಿರಲಿಲ್ಲ’ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೊಟ್ ಹೇಳಿದ್ದಾರೆ.