ನವದೆಹಲಿ (ಪಿಟಿಐ): ಉತ್ತರ ಭಾರತದಲ್ಲಿ ಚಳಿ ಹಾಗೂ ದಟ್ಟ ಮಂಜಿನ ಅಬ್ಬರ ಮುಂದುವರಿದಿದೆ. ಭೀಕರ ಚಳಿಗೆ ಉತ್ತರ ಪ್ರದೇಶ ಹಾಗೂ ಪಂಜಾಬ್ ಸೇರಿದಂತೆ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ. ಸುಗಮ ಸಂಚಾರಕ್ಕೆ ದಟ್ಟು ಮಂಜು ಅಡ್ಡಿಯಾಗಿದ್ದು, 70ಕ್ಕೂ ಅಧಿಕ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಾಪಮಾನ 4.8 ಗ್ರಿ ಸೆಲ್ಸಿಯಸ್ ಗೆ ಕುಸಿತ ಕಂಡಿದ್ದು, ಈ ಋತುವಿನ ಎರಡನೇ ಅತ್ಯಂತ ಶೀತದಿನ ಎನಿಸಿತು.
ತೀವ್ರ ಚಳಿಯಿಂದಾಗಿ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಓರ್ವ ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಆಗ್ರಾದಲ್ಲಿ ದಟ್ಟ ಮಂಜಿನ ಪರಿಣಾಮ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಅಸುನೀಗಿದ್ದಾರೆ. ಪಂಜಾಬ್ ನಲ್ಲಿ ಚಳಿಗೆ ಇಬ್ಬರು ಬಲಿಯಾಗಿದ್ದಾರೆ.
ಶೀತ ಹಾಗೂ ಮಂಜಿನ ಹವಾಮಾನದ ಪರಿಣಾಮವಾಗಿ ಪಂಜಾಬ್ ಹಾಗೂ ಹರಿಯಾಣದ ವಿಮಾನ ಹಾಗೂ ರೈಲು ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.