ಬೆಂಗಳೂರು: ಪ್ರಶ್ನೆಗೆ ಮಕ್ಕಳು ಸರಿ ಉತ್ತರ ನೀಡುತ್ತಿದ್ದಂತೆ ಪೋಷಕರ ಖುಷಿ ಮುಗಿಲು ಮುಟ್ಟುತ್ತಿತ್ತು. ಉತ್ತರ ತಪ್ಪಾದಾಗ ಏನೋ ಚಡಪಡಿಕೆ. ‘ಛೇ’ ಎಂಬ ಉದ್ಗಾರ. ಫೈನಲ್ ಸ್ಪರ್ಧೆಯು ಟೈಬ್ರೇಕರ್ ಹಂತ ತಲುಪಿದಾಗಲಂತೂ ಮೊಗದಲ್ಲಿ ಮತ್ತಷ್ಟು ದುಗುಡ.
ಚಾಂಪಿಯನ್ ಆಗುತ್ತಿದ್ದಂತೆ ತಮ್ಮ ಪುತ್ರಿಯರನ್ನು ತಬ್ಬಿಕೊಂಡ ಆ ಪೋಷಕರ ಕಂಗಳಲ್ಲಿ ಏನನ್ನೋ ಸಾಧಿಸಿದ ಖುಷಿ.
ಇಂಥ ಭಾವುಕತೆ, ಸಂತಸ ಹಾಗೂ ಜ್ಞಾನದ ಸಂಗಮಕ್ಕೆ ವೇದಿಕೆಯಾಗಿದ್ದು ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ನ ಗ್ರ್ಯಾಂಡ್ ಫೈನಲ್. ಈ ವಿಶೇಷ ಕ್ವಿಜ್ನ ಪ್ರಾಯೋಜಕತ್ವ ವಹಿಸಿದ್ದು ದೀಕ್ಷಾ ನೆಟ್ವರ್ಕ್ ಸಂಸ್ಥೆ.
ನಗರದ ಕುವೆಂಪು ಕಲಾ ಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಲ್ಲಿ ಪ್ರತಿ ಪ್ರಶ್ನೆಗೂ ಉತ್ತರಿಸುವ ತವಕ, ಚಾಂಪಿಯನ್ ಆಗಲೇಬೇಕೆಂಬ ಛಲ, ತಮ್ಮ ಜ್ಞಾನ ಭಂಡಾರವನ್ನು ಬಿಚ್ಚಿಡುವ ಉತ್ಸುಕತೆ ಮೇಳೈಸಿತ್ತು.
ಚಾಂಪಿಯನ್ ಆದ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಸಿ.ವೈಷ್ಣವಿ ಹಾಗೂ ಎಸ್.ಸುಶ್ಮಿತಾ ತಮ್ಮ ಪೋಷಕರೊಂದಿಗೆ ಬಂದಿದ್ದರು. ಒತ್ತಡ, ಆತಂಕವನ್ನು ದಾಟಿ ಗೆಲುವಿನ ಹೊನಲಿನಲ್ಲಿ ತೇಲಿದರು. ತಮ್ಮ ಪುತ್ರಿಯರ ಸಾಧನೆ ಹೇಳಿಕೊಂಡು ಹೆಮ್ಮೆಯಿಂದ ಬೀಗಿದ್ದು ಪೋಷಕರು.
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಖುಷಿಯಿಂದ ಜಿಗಿದಾಡಿದರೆ, ಉಳಿದ ತಂಡದವರು ಹೊಸ ವಿಷಯ ಕಲಿತ ಸವಿನೆನಪಿನ ಬುತ್ತಿಯೊಂದಿಗೆ ಮರಳಿದರು. ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಬ್ಬರು, ‘ಸದ್ಯಕ್ಕೆ ಗೆಲುವನ್ನು ಮುಂದೂಡಿದ್ದೇವೆ. ಮುಂದಿನ ಬಾರಿ ನಾವೇ ಚಾಂಪಿಯನ್’ ಎಂದಾಗ ಅವರ ಕಂಗಳಲ್ಲಿ ಜ್ಞಾನದಾಹ ಹಾಗೂ ಛಲ ಎದ್ದು ಕಾಣುತಿತ್ತು.
ಬೆಳಿಗ್ಗೆಯಿಂದಲೇ ಚಡಪಡಿಕೆ: ಬೆಳಿಗ್ಗೆ 8 ಗಂಟೆಗೆ ಬಂದಿದ್ದ ವಿದ್ಯಾರ್ಥಿಗಳು ಪುಸ್ತಕ ಹಿಡಿದು ಕೊನೆಯ ಹಂತದ ಸಿದ್ಧತೆ ನಡೆಸುತ್ತಿದ್ದ ದೃಶ್ಯ
ಕಂಡುಬಂತು. ಪುಸ್ತಕ, ನಿಯತಕಾಲಿಕೆ, ಪತ್ರಿಕೆಗಳನ್ನು ಹಿಡಿದ ಪೋಷಕರು ತಮ್ಮ ಮಕ್ಕಳಿಗೆ ಮಾಹಿತಿ ನೀಡುತ್ತಿದ್ದರು.
ಮತ್ತೊಬ್ಬರು ತಮ್ಮ ಪುತ್ರಿಗೆ ತಿಂಡಿ ತಿನಿಸುತ್ತಲೇ ‘ಇಸ್ರೊಗೆ ಸಂಬಂಧಿಸಿದ ಪ್ರಶ್ನೆ ಕೇಳಬಹುದು. ನಾನು ಹೇಳಿಕೊಟ್ಟಿದ್ದನ್ನು ಮರೆಯಬೇಡ’ ಎನ್ನುತ್ತಿದ್ದರು. ಇನ್ನೊಬ್ಬರು ಸ್ಮಾರ್ಟ್ ಫೋನ್ ನೆರವಿನಿಂದ ತಮ್ಮ ಪುತ್ರನಿಗೆ ‘ಭಾರತ ರತ್ನ’ ಪುರಸ್ಕೃತರ ಪಟ್ಟಿ ತೋರಿಸುತ್ತಿದ್ದರು.
‘ಇಂಥ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯುತ್ತಿರಬೇಕು ಕಣ್ರಿ. ಮಕ್ಕಳ ಜ್ಞಾನ ಹೆಚ್ಚಾಗುತ್ತೆ. ಜೊತೆಗೆ ಆಸಕ್ತಿಯೂ ಬರುತ್ತೆ’ ಎಂದು ಮಕ್ಕಳೊಂದಿಗೆ ಶಿವಮೊಗ್ಗದಿಂದ ಬಂದಿದ್ದ ದಂಪತಿ ಕಲಾಕ್ಷೇತ್ರದ ಮುಖ್ಯದ್ವಾರದಲ್ಲಿ ನಿಂತು ಮಾತನಾಡಿಕೊಳ್ಳುತ್ತಿದ್ದರು.
ಬಾಲಕಿಯರೇ ಮುಂದು: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಪ್ರತಿ ಬಾರಿ ಬಾಲಕಿಯರೇ ಮೇಲುಗೈ ಸಾಧಿಸುವುದನ್ನು ಕೇಳಿದ್ದೇವೆ. ‘ಪ್ರಜಾವಾಣಿ’ ಕ್ವಿಜ್ನಲ್ಲಿ ಅವರದ್ದೇ ಮೇಲುಗೈ. ಚಾಂಪಿಯನ್ ಆದ ತಂಡದಲ್ಲಿದ್ದದ್ದು ಬಾಲಕಿಯರು. ದ್ವಿತೀಯ ಸ್ಥಾನ ಪಡೆದ ತಂಡದ ಇಬ್ಬರಲ್ಲಿ ಒಬ್ಬರು ಬಾಲಕಿ ಎನ್ನುವುದು ವಿಶೇಷ. ಅಷ್ಟೇ ಅಲ್ಲ, ಬೆಂಗಳೂರು ನಗರದ ಮಕ್ಕಳನ್ನು ಹಿಂದಿಕ್ಕಿ ಮಿಂಚಿದರು. ನಿಖರ ಉತ್ತರ ಹೇಳಿ ಭೇಷ್ ಎನಿಸಿಕೊಂಡರು. ಕೌತುಕದ ಪ್ರಶ್ನೆಗಳಿಗೆ ಅಷ್ಟೇ ಸ್ವಾರಸ್ಯಕರವಾಗಿ ಉತ್ತರಿಸಿದರು.
ಮಿಂಚಿದ ಪ್ರೇಕ್ಷಕರು: ತಮ್ಮತ್ತ ತೂರಿಬಂದ ಎಲ್ಲಾ ಪ್ರಶ್ನೆಗಳಿಗೆ ಚಾಣಾಕ್ಷತನದ ಉತ್ತರ ನೀಡಿ ಮಿಂಚಿದ್ದು ಪ್ರೇಕ್ಷಕರು. ವೇದಿಕೆ ಮೇಲಿದ್ದ ಸ್ಪರ್ಧಿಗಳು ಉತ್ತರಿಸದ ಪ್ರಶ್ನೆಗಳನ್ನು ಅವರಲ್ಲಿ ಕೇಳಲಾಯಿತು. ಜೊತೆಗೆ ಪ್ರೇಕ್ಷಕರಿಗೆಂದೇ ಕೆಲ ಪ್ರಶ್ನೆಗಳನ್ನು ಹಾಕಲಾಯಿತು. ಸರಿ ಉತ್ತರ ನೀಡಿದವರಿಗೆ ಉಡುಗೊರೆಯೂ ಇತ್ತು.
ಸಾವಿರಕ್ಕೂ ಅಧಿಕ ತಂಡ: ಆರು ವಲಯಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ಪ್ರತಿ ವಲಯದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ 12 ತಂಡಗಳು (24 ವಿದ್ಯಾರ್ಥಿಗಳು) ಸೆಮಿಫೈನಲ್ ಕಣದಲ್ಲಿದ್ದವು. ಗ್ರ್ಯಾಂಡ್ ಫೈನಲ್ನಲ್ಲಿ ಆರು ತಂಡಗಳ (12 ವಿದ್ಯಾರ್ಥಿಗಳು) ನಡುವಿನ ಪೈಪೋಟಿ ಆರಂಭದಿಂದಲೇ ಕುತೂಹಲ ಮೂಡಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.