ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ತಂಡಕ್ಕೆ ಪ್ರಶಸ್ತಿ

ಕಿವುಡರ ಕ್ರಿಕೆಟ್‌: ಶೊಯೆಬ್‌ ಆಲ್‌ರೌಂಡ್‌ ಪ್ರದರ್ಶನ
Last Updated 21 ಡಿಸೆಂಬರ್ 2014, 19:48 IST
ಅಕ್ಷರ ಗಾತ್ರ

ವಿಜಯಪುರ: ಬೆಂಗಳೂರು ತಂಡವನ್ನು 15 ರನ್‌ಗಳಿಂದ ಮಣಿಸಿದ  ಚಿಕ್ಕಮಗಳೂರು ಜಿಲ್ಲಾ ತಂಡ ಭಾನುವಾರ ಮುಕ್ತಾಯವಾದ ಕಿವುಡರ ರಾಜ್ಯಮಟ್ಟದ ನಾಲ್ಕನೇ ಕ್ರಿಕೆಟ್‌ ಟೂರ್ನಿಯಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು.

ಇಲ್ಲಿನ ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಚಿಕ್ಕಮಗಳೂರು ತಂಡವು 13.3 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡರೂ ನಾಯಕ ಶೊಯೆಬ್‌ ಮಹಮ್ಮದ್‌ 37 ಎಸೆತಗಳಲ್ಲಿ ಗಳಿಸಿದ 68 (6ಸಿಕ್ಸರ್‌) ರನ್‌ಗಳ ನೆರವಿನಿಂದ  108 ರನ್ ಕಲೆ ಹಾಕಿತು.

ಹರಿನಂದನ್‌ ಹೊರತುಪಡಿಸಿ ಉಳಿದವರು ಯಾರೂ ಒಂದಂಕಿ ದಾಟದೆ ಪೆವಿಲಿಯನ್‌ ಹಾದಿ
ಹಿಡಿದರು. ಬೆಂಗಳೂರು ತಂಡದ ಮೋಹನ್, ಶ್ರೀಹರ್ಷ, ಪಿಂಟೊ ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ತಂಡವು ಚಿಕ್ಕಮಗಳೂರು ತಂಡದ ಶೊಯೆಬ್‌ ಮಹಮ್ಮದ್‌, ಹರಿನಂದನ್‌, ಪೂರ್ಣೇಶ್‌ ಅವರ ಪ್ರಭಾವಿ ಬೌಲಿಂಗ್‌ ದಾಳಿ ಎದುರು ಮಂಕಾಯಿತು.

ಜಗನ್ನಾಥ್‌  (30) ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಶ್ರಮಿಸಿದರೂ, ಉಳಿದ ಆಟಗಾರರು ಗಮನಾರ್ಹ ಪ್ರದರ್ಶನ ನೀಡಲಿಲ್ಲ. ಆ್ಯನ್ಸಿಲ್‌ ಪಿಂಟೊ (19) ರನೌಟ್‌ ಆಗುವ ಮೂಲಕ ತಂಡದ ಗೆಲುವಿನ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್‌: ಚಿಕ್ಕಮಗಳೂರು ತಂಡ: 13.3 ಓವರ್‌ಗಳಲ್ಲಿ 108ಕ್ಕೆ ಆಲೌಟ್‌ (ಶೊಯೆಬ್‌ ಮಹಮ್ಮದ್‌ 68, ಹರಿನಂದನ್‌ 14, ಶ್ರೀಹರ್ಷ 21ಕ್ಕೆ3, ಪಿಂಟೋ 16ಕ್ಕೆ 2, ಮೋಹನ್ 9ಕ್ಕೆ 2).

ಬೆಂಗಳೂರು ತಂಡ: 15 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 93 (ಜಗನ್ನಾಥ್‌ 30, ಆ್ಯನ್ಸಿಲ್‌ ಪಿಂಟೋ 19, ಜಿ.ಇ. ಗಿರೀಶ್‌ 20ಕ್ಕೆ 2, ಶೊಯೆಬ್‌ ಮಹಮ್ಮದ್‌ 16ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT