ನವದೆಹಲಿ(ಪಿಟಿಐ): ಬಹುಕೋಟಿ ಮೊತ್ತದ ಶಾರದ ಮತ್ತು ಸಿ–ಶೋರ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಮಂಗಳವಾರ ದೆಹಲಿ, ಮುಂಬೈ, ಕೋಲ್ಕತ್ತ ಸೇರಿದಂತೆ ನಾಲ್ಕು ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದರು.
ಸೀ–ಶೋರ್ ಸಮೂಹದ ಹಗರಣಕ್ಕೆ ಸಂಬಂಧಿಸಿದಂತೆ ಒಡಿಶಾ ಸಂಸದ ಪ್ಯಾರಿಮೋಹನ್ ಮೊಹಪತ್ರಾ ನಿವಾಸದ ಮೇಲೂ ಸಿಬಿಐ ತಂಡ ದಾಳಿ ನಡೆಸಿತು. ಅವರ ಬ್ಯಾಂಕ್ ಪಾಸ್ಬುಕ್, ಆಸ್ತಿ ವಿವರ ಒಳಗೊಂಡ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೆಹಲಿ ಮತ್ತು ಭುವನೇಶ್ವರದಲ್ಲಿ ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳ ನಿವಾಸದ ಮೇಲೂ ದಾಳಿ ನಡೆಯಿತು ಎಂದು ಮೂಲಗಳು ತಿಳಿಸಿವೆ.
‘ಸಿಬಿಐ ತಮ್ಮ ನಿವಾಸದ ಮೇಲೆ ಯಾಕೆ ದಾಳಿ ನಡೆಸಿದೆ ಎನ್ನುವುದು ತಿಳಿದಿಲ್ಲ, ತಮಗೂ ಚಿಟ್ಫಂಡ್ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಪ್ಯಾರಿಮೋಹನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾರದಾ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ‘ಸಿಬಿಐ’ ಸೋಮವಾರವಷ್ಟೇ ಎರಡನೆಯ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದಾದ ಮರು ದಿನವೇ ಈ ದಾಳಿ ನಡೆದಿರುವುದು ಗಮನೀಯ. ಮಂಗಳವಾರ ನಡೆಸಿದ ದಾಳಿಯ ವಿವರವನ್ನು ಗೌಪ್ಯವಾಗಿ ಇಡಲಾಗಿದೆ.