ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನ ಕಳ್ಳಸಾಗಣೆ ಮೂರು ಪಟ್ಟು ಹೆಚ್ಚಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳು, ಬಂದರು ಮತ್ತು ಗಡಿ ಪ್ರದೇಶಗಳಲ್ಲಿ ಹೆಚ್ಚು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.
ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ (ಡಿಆರ್ಐ) ಮತ್ತು ಸೀಮಾ ಸುಂಕ ವಂಚನೆ ತಡೆ ವಿಭಾಗ ಈ ಎಚ್ಚರಿಕೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಏಪ್ರಿಲ್–ಸೆಪ್ಟೆಂಬರ್ನಲ್ಲಿ ಚಿನ್ನ ಕಳ್ಳಸಾಗಣೆಯ 550 ಪ್ರಕರಣಗಳು ದಾಖಲಾಗಿದ್ದು, ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಚಿನ್ನ ಕಳ್ಳಸಾಗಣೆಗೆ ತಂಪು ಪಾನೀಯ ಬಾಟಲಿಗಳು, ಗೃಹ ಬಳಕೆ ವಸ್ತುಗಳು ಮತ್ತು ಪಾದರಕ್ಷೆಗಳನ್ನು ಬಳಸುವ ಸಾಧ್ಯತೆ ಬಗ್ಗೆಯೂ ಎಚ್ಚರಿಕೆ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನ ಕಳ್ಳಸಾಗಣೆ ಹೆಚ್ಚುವ ಬಗ್ಗೆ ಕಂದಾಯ ಗುಪ್ತಚರ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಕಳೆದ 3 ವರ್ಷದಲ್ಲಿ ಒಟ್ಟು 852 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.