ಗ್ಲಾಸ್ಗೊ (ಪಿಟಿಐ/ಐಎಎನ್ಎಸ್): ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಸತೀಶ್ ಶಿವಲಿಂಗಮ್ ಹಾಗೂ ಜಿತು ರಾಯ್ ಅವರು ಕ್ರಮವಾಗಿ ವೇಟ್ಲಿಫ್ಟಿಂಗ್ ಹಾಗೂ ಶೂಟಿಂಗ್ನಲ್ಲಿ ಬಂಗಾರದ ಪದಕ ಗೆದ್ದುಕೊಂಡರು.
ತಮಿಳುನಾಡಿನ ಸತೀಶ್ 77 ಕೆ.ಜಿ. ವಿಭಾಗದ ಪೈಪೋಟಿಯಲ್ಲಿ ಒಟ್ಟು 328 ಕೆ.ಜಿ. ಭಾರ ಎತ್ತಿ ಚಿನ್ನದ ಪದಕಕ್ಕೆ ಕೊರಳೊಡಿದ್ದರು. ದೆಹಲಿ ಕಾಮನ್ವೆಲ್ತ್ ಕೂಟದ 69 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದ ಒಡಿಶಾದ ಕೆ. ರವಿ ಕುಮಾರ್ ಈ ಸಲ ಬೆಳ್ಳಿ ಗೆದ್ದರು.
ಶೂಟಿಂಗ್ನಲ್ಲೂ ತಪ್ಪದ ಗುರಿ: 50ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ನಿಖರ ಪ್ರದರ್ಶನ ತೋರಿದ ಜಿತು ರಾಯ್ ಬಂಗಾರದ ಪದಕ ತಮ್ಮದಾಗಿಸಿಕೊಂಡರು. ವಿಶ್ವ ಯಾಂಕ್ನಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಜಿತು ಒಟ್ಟು 194.1 ಪಾಯಿಂಟ್ಗಳನ್ನು ಕಲೆ ಹಾಕಿದರು. ಇದೇ ಸ್ಪರ್ಧೆಯಲ್ಲಿ ಭಾರತಕ್ಕೆ ಗುರ್ಪಾಲ್ ಸಿಂಗ್ ಇನ್ನೊಂದು ಪದಕ ತಂದಿತ್ತರು. ಇವರು ಒಟ್ಟು 187.2 ಪಾಯಿಂಟ್ ಗಳಿಸಿ ಎರಡನೇ ಸ್ಥಾನ ಪಡೆದರು.
ಮೆಲ್ಬರ್ನ್ ಹಾಗೂ ದೆಹಲಿ ಕಾಮನ್ವೆಲ್ತ್ ಕೂಟಗಳಲ್ಲಿ ಸ್ವರ್ಣ ಜಯಿಸಿದ್ದ ಹಿರಿಯ ಶೂಟರ್ ಗಗನ್ ನಾರಂಗ್ 50ಮೀ. ರೈಫಲ್ ಪ್ರೊನೊ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದರು. ನಿರಾಸೆ: ಸ್ಕ್ವಾಷ್, ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವ ಅವಕಾಶ ತಪ್ಪಿ ಹೋಯಿತು. ಸ್ಕ್ವಾಷ್ನ ಸಿಂಗಲ್ಸ್ನಲ್ಲಿ ಸೌರವ್ ಘೋಷಾಲ್ ‘ಪ್ಲೇ ಆಫ್’ ಪಂದ್ಯದಲ್ಲಿ ಸೋಲು ಕಂಡರು.
ಟೇಬಲ್ ಟೆನಿಸ್ನಲ್ಲಿ ಭಾರತ ಪುರುಷರ ತಂಡ 1–3ರಲ್ಲಿ ನೈಜೀರಿಯದ ಎದುರು ಪರಾಭವಗೊಂಡಿತು. ಬಾಕ್ಸಿಂಗ್ನಲ್ಲಿ ಎಲ್. ದೇವೇಂದ್ರೂ ಸಿಂಗ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. ಆದರೆ, ಶಿವ ಥಾಪಾ ನಿರಾಸೆ ಅನುಭವಿಸಿದರು.
ಸೋಮವಾರದ ವೇಳೆಗೆ ಭಾರತ ಒಟ್ಟು 25 ಪದಕಗಳನ್ನು ಜಯಿಸಿತ್ತು. ಅದರಲ್ಲಿ ನಾಲ್ಕು ಚಿನ್ನ ಸೇರಿದಂತೆ 12 ಪದಕಗಳು ಶೂಟಿಂಗ್ನಲ್ಲಿಯೇ ಬಂದಿವೆ. ವೇಟ್ಲಿಫ್ಟಿಂಗ್ನಲ್ಲಿ 9 ಪದಕಗಳು ಲಭಿಸಿವೆ.