ನವದೆಹಲಿ (ಪಿಟಿಐ): ದೇಶದಲ್ಲಿ ಚಿಲ್ಲರೆ ಸಿಗರೇಟು ಮಾರಾಟ ನಿಷೇಧಿಸುವ ಹಾಗೂ ತಂಬಾಕು ಉತ್ಪನ್ನಗಳ ಖರೀದಿಗೆ ವಯಸ್ಸಿನ ಕನಿಷ್ಠ ಮಿತಿ ಏರಿಸುವ ಪ್ರಸ್ತಾವಗಳನ್ನು ಒಳಗೊಂಡ ತಜ್ಞರ ವರದಿಯನ್ನು ಆರೋಗ್ಯ ಸಚಿವಾಲಯ ಅಂಗೀಕರಿಸಿದ್ದು, ಈ ಸಂಬಂಧ ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.
ಆರೋಗ್ಯ ಸಚಿವಾಲಯವು ಈ ಶಿಫಾರಸುಗಳಿರುವ ತಜ್ಞರ ವರದಿಯನ್ನು ಅಂಗೀಕರಿಸಿದೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
‘ಸಮಿತಿಯ ಶಿಫಾರಸುಗಳನ್ನು ಸಚಿವಾಲಯವು ಅಂಗೀಕರಿಸಿದೆ. ಈ ಶಿಫಾರಸುಗಳನ್ನು ಸಚಿವ ಸಂಪುಟದ ಮುಂದಿಡಲಾಗುವುದು. ಅಂತಿಮವಾಗಿ ಸಂಸತ್ತಿನ ಒಪ್ಪಿಗೆಯ ನಂತರ ಇದು ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ’ ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್ಒ) ತಂಬಾಕು ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತ ಕೂಡ ಸಹಿ ಹಾಕಿದ್ದು,
ಸಮಿತಿಯ ಶಿಫಾರಸುಗಳು |
---|
*ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಕ್ಕೆ ವಿಧಿಸುವ ದಂಡವನ್ನು ₨ 200ರಿಂದ ₨ 20,000ಕ್ಕೆ ಹೆಚ್ಚಿಸಲಿ. *ವಯಸ್ಸಿನ ಮಿತಿ 18ರಿಂದ 25ಕ್ಕೆ ಏರಿಸಲು ಸಲಹೆ |
ಅದಕ್ಕೆ ಪೂರಕವಾಗಿ ಸಚಿವಾಲಯವು ತಜ್ಞರ ವರದಿಯನ್ನು ಅಂಗೀಕರಿಸಿದೆ. ಸದ್ಯ ದೇಶದಲ್ಲಿನ ಒಟ್ಟು ಸಿಗರೇಟು ಮಾರಾಟದಲ್ಲಿ ಶೇ ೭೦ರಷ್ಟು ಚಿಲ್ಲರೆಯಾಗಿಯೇ ಮಾರಾಟವಾಗುತ್ತಿದೆ. ಹೀಗಾಗಿ, ಈ ಶಿಫಾರಸುಗಳು ಕಾನೂನಾಗಿ ಜಾರಿಗೊಂಡರೆ ಶೇ ೧೦ರಿಂದ ೨೦ರಷ್ಟು ವ್ಯಾಪಾರ ನಷ್ಟ ಆಗಬಹುದು ಎಂಬುದು ವಿಶ್ಲೇಷಕರ ಲೆಕ್ಕಾಚಾರ. ಸಿಗರೇಟ್ ಉದ್ದಿಮೆಯಿಂದ ಸರ್ಕಾರಕ್ಕೆ ವಾರ್ಷಿಕ ೨೫ ಸಾವಿರ ಕೋಟಿ ರೂಪಾಯಿ ತೆರಿಗೆ ಬರುತ್ತಿದೆ. ಆದರೆ ಇದರಿಂದ ಆಗುತ್ತಿರುವ ಆರೋಗ್ಯದ ದುಷ್ಪರಿಣಾಮದ ನಷ್ಟ ಇನ್ನೂ ಅಧಿಕ ಎಂಬುದು ತಜ್ಞರ ಅಭಿಮತ.
ತಂಬಾಕಿನಿಂದ ಬರುತ್ತಿರುವ ಕಾಯಿಲೆಗಳಿಂದ ೨೦೧೧ರ ವರ್ಷವೊಂದರಲ್ಲೇ ದೇಶಕ್ಕೆ ೧.೦೪ ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾ ಸಂಸ್ಥೆ ಅಂದಾಜಿಸಿದೆ.
ತಂಬಾಕು ಬಳಕೆ ಮೇಲೆ ಇರುವ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಹಿಂದಿನ ಆರೋಗ್ಯ ಸಚಿವ ಹರ್ಷವರ್ಧನ್ ಅವರೂ ಹಲವಾರು ಬಾರಿ ಹೇಳಿದ್ದರು.
ಸೇದುವ ಸಿಗರೇಟುಗಳೆಷ್ಟು?: ಯೂರೊಮಾನಿಟರ್ ಇಂಟರ್ನ್ಯಾಷನಲ್ ಸಮೀಕ್ಷೆ ಪ್ರಕಾರ, ೨೦೧೨ರಲ್ಲಿ ಭಾರತೀಯರು ಸೇದಿರುವ ಸಿಗರೇಟುಗಳ ಸಂಖ್ಯೆ ೧೦ ಸಾವಿರ ಕೋಟಿಗೂ ಹೆಚ್ಚು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.