ಕೋಲ್ಕತ್ತ (ಪಿಟಿಐ, ಐಎಎನ್ಎಸ್): ಚುನಾವಣೆ ನಡೆಯುವ ದಿನದಂದು ರಾಜಕೀಯ ಪಕ್ಷವೊಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಆದರೆ ಮತದಾನ ನಡೆಯುವ ಕಡೆಗಳಲ್ಲಿ ಇದರ ಪ್ರಕಟಣೆ ಅಥವಾ ಪ್ರಸಾರಕ್ಕೆ ನಿಷೇಧವಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮೊದಲ ಹಂತದ ಮತದಾನ ನಡೆಯುವ ಸೋಮವಾರದಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲು ಹೊರಟಿರುವ ಬಗ್ಗೆ ಭಾನುವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ವಿ.ಎಸ್. ಸಂಪತ್ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಅವರು ಪಶ್ಚಿಮಬಂಗಾಳದಲ್ಲಿ ಚುನಾವಣಾ ಸಿದ್ಧತೆ ಕುರಿತು ರಾಜಕೀಯ ಪಕ್ಷಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಇಸಿಯವರು ಇತರ ಇಬ್ಬರು ಚುನಾವಣಾ ಆಯುಕ್ತರೊಡನೆ ಈ ಸಭೆಗಳನ್ನು ನಡೆಸಿ, ಸಿದ್ಧತೆಯನ್ನು ಪರಿಶೀಲಿಸಿದರು.
ಕೋಮುಗಲಭೆಗೆ ತುತ್ತಾಗಿರುವ ಉತ್ತರ ಪ್ರದೇಶದ ಮುಜಫ್ಫರ್ನಗರದಲ್ಲಿ ಬಿಜೆಪಿ ಪರ ಆರ್ಎಸ್ಎಸ್ ಧಾರ್ಮಿಕ ನೆಲೆಯಲ್ಲಿ ಪ್ರಚಾರ ಮಾಡುತ್ತಿರುವ ಆರೋಪದ ಬಗ್ಗೆ ಉತ್ತರಿಸಿ, ಇದು ನಿಜವಾದಲ್ಲಿ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಈ ಕುರಿತು ಆಯೋಗ ಗಮನ ಹರಿಸುವುದು ಎಂದು ಅವರು ತಿಳಿಸಿದರು.
ಪಕ್ಷಪಾತದ, ನಿಷ್ಕ್ರಿಯ ಅಧಿಕಾರಿಗಳಿಗೆ ಆಯೋಗ ಎಚ್ಚರಿಕೆ
ಚುನಾವಣಾ ಕಾರ್ಯದಲ್ಲಿ ಪಕ್ಷಪಾತದ ನಡವಳಿಕೆ ತೋರುವ ಅಥವಾ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯವಾಗಿರುವ ಅಧಿಕಾರಿಗಳ ಮೇಲೆ ನಿಷ್ಠುರ ಕ್ರಮ ಜರುಗಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಎಚ್ಚರಿಸಿದರು.
ಅಧಿಕಾರಿಗಳು ಚುನಾವಣಾ ನೀತಿಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿರುವಂತೆ ನೋಡಿಕೊಳ್ಳಬೇಕಿದ್ದು, ಇವುಗಳ ಉಲ್ಲಂಘನೆಯಾಗದಂತೆ ಗಂಭೀರವಾಗಿ ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಆಡಳಿತಾರೂಢ ಪಕ್ಷದ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಾ, ವಿರೋಧಿಗಳ ಮೇಲೆ ಪಕ್ಷಪಾತದಿಂದ ವರ್ತಿಸುತ್ತಿರುವುದಾಗಿ ಪ್ರತಿಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ಅವರು ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮಗಳನ್ನು ಕೈಗೊಂಡು ಸೂಕ್ತ ಫಲಿತಾಂಶ ತೋರಿಸಬೇಕು ಎಂದು ಅವರು ಸೂಚಿಸಿದರು.
ಪಶ್ಚಿಮ ಬಂಗಾಳದಲ್ಲಿ ಅಧಿಕಾರಿಗಳು ತೃಣಮೂಲ ಕಾಂಗ್ರೆಸ್ ಪರವಾಗಿರುವ ಮತ್ತು ವಿರೋಧಿಗಳನ್ನು ತಾರತಮ್ಯದಿಂದ ಕಾಣುತ್ತಿರುವ ಹಾಗೂ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮತ್ತು ಅವರ ಇಲಾಖೆ ತಮ್ಮ ದೂರುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಮೇಲಿನಂತೆ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.