ಒಂಬತ್ತು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಲ್ಲಿ 71ರಲ್ಲಿ ಗೆದಿದ್ದ ಬಿಜೆಪಿ ದಿಗ್ವಿಜಯವನ್ನೇ ಸಾಧಿಸಿತ್ತು. ಆದರೆ ಈಗ ನಡೆದ ಉಪಚುನಾವಣೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಸಾಧಿಸಲಾಗಿರುವುದು ಕೇವಲ ಮೂರು ಕ್ಷೇತ್ರಗಳಲ್ಲಿ. ಉತ್ತರ ಪ್ರದೇಶದ ಪಶ್ಚಿಮ ಭಾಗದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಈ ಕ್ಷೇತ್ರಗಳಿವೆ ಎಂಬುದು ಗಮನಾರ್ಹ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷವೇ 8 ಸ್ಥಾನಗಳನ್ನು ಗೆದ್ದುಕೊಂಡಿದೆ.
ಕೋಮುದ್ವೇಷ ರಾಜಕಾರಣಕ್ಕೆ ಮತದಾರರು ಮಣೆ ಹಾಕಿಲ್ಲ ಎಂಬುದು ಇಲ್ಲಿ ಸುವ್ಯಕ್ತ. ಜೊತೆಗೆ ಚುನಾವಣಾ ಕಣಕ್ಕೆ ಬಿಎಸ್ಪಿ ಇಳಿಯದಿದ್ದುದೂ ಎಸ್ಪಿಗೆ ವರವಾಗಿ ಪರಿಣಮಿಸಿತು ಎಂಬುದನ್ನು ಮರೆಯಲಾಗದು. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ನಲ್ಲೂ ಬಿಜೆಪಿ 9 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 26 ಲೋಕಸಭಾ ಕ್ಷೇತ್ರಗಳನ್ನೂ ಗೆದ್ದುಕೊಂಡಿದ್ದ ಬಿಜೆಪಿಗೆ ಇದು ಸರಾಗ ಗೆಲುವು ಆಗಿಲ್ಲ ಎಂಬುದು ಇಲ್ಲಿ ಮುಖ್ಯ. ರಾಜಸ್ತಾನದಲ್ಲೂ ಬಿಜೆಪಿಯೇ ಆಡಳಿತ ಪಕ್ಷವಾಗಿದ್ದೂ, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆದ್ದುಕೊಳ್ಳಲು ಸಾಧ್ಯವಾಗಿರುವುದು ಒಂದು ಕ್ಷೇತ್ರವನ್ನು ಮಾತ್ರ.
ಉಳಿದ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಮೋದಿ ಸರ್ಕಾರದ 100 ದಿನಗಳ ಆಡಳಿತಕ್ಕೆ ಜನ ನೀಡಿರುವ ಅಭಿಪ್ರಾಯ ಇದು ಎಂದು ಭಾವಿಸಬಾರದು ಎಂದು ಬಿಜೆಪಿ ವಕ್ತಾರರು ಹೇಳುತ್ತಿದ್ದಾರೆ. ಆದರೆ ಧರ್ಮದ ಆಧಾರದಲ್ಲಿ ಮತಗಳನ್ನು ವಿಭಜಿಸುವ ಕಾರ್ಯತಂತ್ರ ಈ ಉಪಚುನಾವಣೆಗಳಲ್ಲಿ ಯಶಸ್ಸು ತಂದುಕೊಟ್ಟಿಲ್ಲ ಎಂಬುದು ಮಾತ್ರ ಸ್ಪಷ್ಟ.
ಗೋರಖ್ಪುರದ ಸಂಸತ್ ಸದಸ್ಯ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರದ ನೇತೃತ್ವ ವಹಿಸಿ ಆಡಿದ ಮಾತುಗಳು ಮತಗಳಾಗಿ ಪರಿವರ್ತಿತವಾಗಿಲ್ಲ. ಹಾಗೆಯೇ ಮುಸ್ಲಿಂ ಸಮುದಾಯದ ಮೇಲೆ ಅಪರೋಕ್ಷ ಆಕ್ರಮಣಗಳನ್ನು ಮಾಡುವ ‘ಲವ್ ಜಿಹಾದ್’ ವಿಚಾರದ ಬಗ್ಗೆ ಸಾಕ್ಷಿ ಮಹಾರಾಜ್ ಅವರ ಮಾತುಗಳೂ ಮತದಾರರ ಮೇಲೆ ಪ್ರಭಾವ ಬೀರಿಲ್ಲ.
ಹೀಗಿದ್ದೂ ಉಪಚುನಾವಣೆಗಳ ಫಲಿತಾಂಶದ ಆಧಾರದ ಮೇಲೆ ಸಾರಾಸಗಟಾದ ನಿರ್ಣಯಗಳನ್ನು ಕೈಗೊಳ್ಳುವುದೂ ಸಾಧ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮುಖಭಂಗ ಅಥವಾ ಎಸ್ಪಿಗೆ ಮತದಾರರ ಅನುಮೋದನೆ ಎಂದು ಸರಳೀಕರಿಸಲಾಗದು. ಸ್ಥಳೀಯ ರಾಜಕೀಯ ಸಮೀಕರಣಗಳು ಈ ಚುನಾವಣೆ ಮೇಲೆ ಪ್ರಭಾವ ಬೀರಿರುವುದೂ ನಿಜ. ಆದರೆ ಮತದಾರ-ರನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದಕ್ಕೆ ಈ ಫಲಿತಾಂಶಗಳು ಸ್ಪಷ್ಟ ಸೂಚನೆ.
ಪ್ರಜಾಪ್ರಭುತ್ವದ ಶಕ್ತಿ ಇರುವುದೇ ಇಲ್ಲಿ. ಪ್ರತಿ ಚುನಾವಣೆಯೂ ಒಂದು ಪಾಠ ಎಂಬುದನ್ನು ಮರೆಯಬಾರದು. ಉತ್ತರ ಪ್ರದೇಶ, ರಾಜಸ್ತಾನ ಹಾಗೂ ಗುಜರಾತ್ ಚುನಾವಣೆ ಫಲಿತಾಂಶಗಳಲ್ಲಿ ಈ ಪಾಠ ಸ್ಪಷ್ಟವಾಗಿದೆ. ಅಭಿವೃದ್ಧಿ ರಾಜಕೀಯ ಮಾತಾಡುತ್ತಲೇ ರಾಜಕಾರಣದಲ್ಲಿ ಕೋಮುವಾದ ಬೆಸೆಯುವುದರಿಂದ ಫಲ ಇಲ್ಲ ಎಂಬುದನ್ನು ಬಿಜೆಪಿ ಅರಿತು-ಕೊಳ್ಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.