ಮುಧೋಳ: ತಾಲ್ಲೂಕಿನ ತಿಮ್ಮಾಪುರ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭಾನುವಾರ ಚುನಾವಣೆ ನಡೆಯಿತು.
ಒಟ್ಟು 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 36 ಜನ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದು ಸಾಮಾನ್ಯ 22, ಹಿಂದುಳಿದ ವರ್ಗ 2, ಪರಿಶಿಷ್ಟ ಜಾತಿ/ಪಂಗಡ 4, ಮಹಿಳಾ 4, ಡ ವರ್ಗ 2 ಹಾಗೂ ಬ ವರ್ಗ 2 ಸ್ಥಾನಗಳಿಗೆ ಅಂತಿಮವಾಗಿ ಸ್ಪರ್ಧಾಕಣದಲ್ಲಿ ಇದ್ದಾರೆ.
ಬೆಳಿಗ್ಗೆ 9 ರಿಂದ 4ರವರೆಗೆ ನಡೆದ ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿತ್ತು. ಅಲ್ಲಲ್ಲಿ ಮಾತಿನ ಚಕಮುಕಿ ನಡೆಯಿತು. ಸುಡು ಬಿಸಿಲಲ್ಲೂ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳಾ ಮತದಾರರು ನಾವೇನೂಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದರು. ಶೇ 80ರಷ್ಟು ಮತದಾನವಾಯಿತು. ಅ ವರ್ಗದಲ್ಲಿ 16,279 ಜನರು ಮತದಾನ ಹಕ್ಕನ್ನು ಹೊಂದಿದ್ದರು. ಇದರಲ್ಲಿ 12, 850 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಬ ವರ್ಗದಲ್ಲಿ 66 ಮತದಾರರ ಪೈಕಿ 64 ಮತದಾರರು ಮತದಾನ ಮಾಡಿದರು. ಡ ವರ್ಗದಲ್ಲಿ 433 ಮತದಾರರಲ್ಲಿ 377 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.
ಶಾಸಕ ಗೋವಿಂದ ಕಾರಜೋಳ, ಲೋಕಸಭೆ ಕಾಂಗ್ರಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಶಾಸಕ ಸಿದ್ದು ಸವದಿ ಹಿರಿಯ ವಕೀಲ ತುಳಸಿಗೇರಿ ಮತಚಲಾಯಿಸಿದರು.