ಲೇಹ್/ ನವದೆಹಲಿ (ಪಿಟಿಐ): ಲಡಾಖ್ನ ಚುಮಾರ್ ಗಡಿ ಪ್ರದೇಶದಲ್ಲಿ ಭಾರತದ ಭೂಪ್ರದೇಶಕ್ಕೆ ನುಗ್ಗಿದ್ದ ಚೀನಾದ ಸೇನೆ ಗುರುವಾರ ರಾತ್ರಿ ಕಾಲ್ತೆಗೆಯಲು ಆರಂಭಿಸಿತು. ಆದರೆ ಶುಕ್ರವಾರ ರಾತ್ರಿ ಹೊತ್ತಿಗೆ ಚುಮಾರ್ ಪ್ರದೇಶದ ಗುಡ್ಡವೊಂದರ ಮೇಲೆ ಮತ್ತೆ ಕೆಲವು ಚೀನಾ ಸೈನಿಕರು ಕಾಣಿಸಿಕೊಂಡಿದ್ದು ಪುನಃ ಆತಂಕವನ್ನು ಸೃಷ್ಟಿಸಿದೆ.
ಚೀನಾದ ಸೇನಾ ಯೋಧರು ಗುರುವಾರ ರಾತ್ರಿ ೯.೪೫ರ ಹೊತ್ತಿಗೆ ಭಾರತದ ನೆಲದಿಂದ ಹಿಂದೆ ಸರಿಯಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಆ ಪ್ರದೇಶಕ್ಕೆ ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದ ಭಾರತದ ಯೋಧರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬದ್ಧತೆ ಪ್ರದರ್ಶಿಸದ ಚೀನಾ ನವದೆಹಲಿ: ಲಡಾಖ್ ಗಡಿಯಲ್ಲಿ ವಾಸ್ತವ ಗಡಿ ರೇಖೆ ಕುರಿತು ಇರುವ ಗೊಂದಲ ನಿವಾರಿಸುವಂತೆ ಭಾರತ ಮುಂದಿಟ್ಟಿದ್ದ ಬೇಡಿಕೆಯನ್ನು ಚೀನಾ ಗಂಭೀರವಾಗಿ ಪರಿಗಣಿಸಿಲ್ಲ. ಮೂರು ದಿನಗಳ ಭಾರತ ಪ್ರವಾಸ ಮುಗಿಸಿ ಶುಕ್ರವಾರ ಸ್ವದೇಶಕ್ಕೆ ಮರಳುವ ಮುನ್ನ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ವಾಸ್ತವ ಗಡಿ ರೇಖೆ ಕುರಿತು ಇರುವ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಆದಷ್ಟು ಬೇಗ ಜಂಟಿ ಯತ್ನ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿಟ್ಟಿರುವ ಪ್ರಸ್ತಾಪಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ. |
ಆದರೂ ಚೀನಾದ ಸೇನೆ (ಪಿಎಲ್ಎ) ವಾಸ್ತವ ಗಡಿ ರೇಖೆಗೆ ತಾಕಿದಂತಿರುವ ತನ್ನ ಭೂಪ್ರದೇಶದಲ್ಲಿ ಠಿಕಾಣಿ ಮುಂದುವರಿಸಿರುವು-ದರಿಂದ ಭಾರತದ ಸೇನೆಯು ಕಟ್ಟೆಚ್ಚರ ವಹಿಸಿದೆ. ಇದೇ ವೇಳೆ, ಡೆಮ್ಚಾಕ್ ಪ್ರದೇಶದಲ್ಲಿ ಆತಂಕ ಮುಂದುವರಿದೇ ಇದೆ. ಕಳೆದ ೧೨ ದಿನಗಳ ಹಿಂದೆ ಆ ಪ್ರದೇಶಕ್ಕೆ ನುಗ್ಗಿದ ಚೀನಾದ ಅಲೆಮಾರಿಗಳಾದ ‘ರೆಬೋಸ್’ಗಳು ಇನ್ನೂ ಅಲ್ಲಿಂದ ಕದಲಿಲ್ಲ. ಭಾರತವು ಇಲ್ಲಿನ ಗ್ರಾಮೀಣ ಪ್ರದೇಶಗಳ ಜನರ ನೀರಾವರಿ ಅನುಕೂಲಕ್ಕಾಗಿ ನಾಲೆ ನಿರ್ಮಾಣ ಮಾಡುತ್ತಿರುವುದನ್ನು ಪಿಎಲ್ಎ ಬೆಂಬಲಿತ ‘ರೆಬೋಸ್’ಗಳು ವಿರೋಧಿಸುತ್ತಿದ್ದಾರೆ. ಇದೇ ವೇಳೆ, ಈ ಭಾಗದಲ್ಲಿ ಚೀನಾದ ಸೇನೆಯು ಭಾರತದ ಭೂಭಾಗದಲ್ಲಿ ಸುಮಾರು ೫೦೦ ಮೀಟರ್ಗಳಷ್ಟು ಒಳಗೆ ಬಂದಿದೆ.
ಚೀನಾದ ಸುಮಾರು ೬೦೦ ಸೈನಿಕರು ಗುರುವಾರ ಬೆಳಗಿನ ಜಾವ ಒಳನುಗ್ಗಿದ್ದರು. ಅಲ್ಲದೇ ಭಾರತದ ಸೇನೆಗೆ ಆ ಪ್ರದೇಶದಿಂದ ಹೊರನಡೆಯಲು ಸೂಚಿಸಿ ಬ್ಯಾನರ್ಗಳನ್ನು ಹಿಡಿದಿದ್ದರು. ಚೀನಾದ ಹೆಲಿಕಾಪ್ಟರ್ಗಳು ಹಗಲಿನಲ್ಲಿ ಕನಿಷ್ಠ ಮೂರು ಸಲ ಸೈನಿಕರಿಗೆ ಆಹಾರದ ಪೊಟ್ಟಣಗಳನ್ನು ಸುರಿದಿದ್ದವು ಎಂದು ಮೂಲಗಳು ತಿಳಿಸಿವೆ.
ವಾಸ್ತವ ಗಡಿ ರೇಖೆಗೆ ಹೊಂದಿಕೊಂಡ ತನ್ನ ಭೂಭಾಗದಲ್ಲಿ ಚೀನಾವು ರಸ್ತೆ ನಿರ್ಮಾಣ ನಡೆಸುತ್ತಿದೆ. ಈ ಕಾಮಗಾರಿಯಲ್ಲಿ ತೊಡಗಿದ್ದವರು ಭಾನುವಾರ ಭಾರತದ ಗಡಿಯೊಳಕ್ಕೆ ನುಗ್ಗಿದರು. ಭಾರತದ ಸೇನೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಆದರೆ ಇದನ್ನು ಒಪ್ಪದ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ ಚೀನಾ ಕಾರ್ಮಿಕರು ಟೈಬರ್ವರೆಗೂ ರಸ್ತೆ ಕಾಮಗಾರಿ ನಡೆಸುವಂತೆ ತಮಗೆ ಸೂಚಿಸಲಾಗಿದೆ ಎಂದರು. ಆದರೆ ಟೈಬರ್ ವಾಸ್ತವ ಗಡಿ ರೇಖೆಯಿಂದ ಐದು ಕಿ.ಮೀ. ಒಳಗೆ ಭಾರತದ ನೆಲದಲ್ಲಿರುವ ಪ್ರದೇಶವಾಗಿದೆ.
ಆಗ ಭಾರತದ ಯೋಧರು, ದೇಶವನ್ನು ಅಕ್ರಮವಾಗಿ ಪ್ರವೇಶಿಸಿದರೆ ಕಾನೂನಿನ ಪ್ರಕಾರ ವಿಚಾರಣೆ ಎದುರಿಸಬೇಕಾಗುತ್ತದೆಂದು ರಸ್ತೆ ನಿರ್ಮಾಣದಲ್ಲಿ ತೊಡಗಿದ್ದವರಿಗೆ ಎಚ್ಚರಿಕೆ ನೀಡಿದರು. ಆದರೂ ಭಾನುವಾರ ಮಧ್ಯರಾತ್ರಿಯ ನಂತರ ಭಾರತದ ಸುಮಾರು ೧೦೦ ಸೈನಿಕರನ್ನು ಚೀನಾದ ೩೦೦ ಸೈನಿಕರು ಸುತ್ತುವರಿದರು. ಆಗ ಭಾರತ ಕೂಡ ಸೇನಾ ನಿಯೋಜನೆಯನ್ನು ತೀವ್ರಗೊಳಿಸಿ ಅತಿಕ್ರಮಣ ಯತ್ನವನ್ನು ಹಿಮ್ಮೆಟ್ಟಿಸಿತು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.