ಬಳ್ಳಾರಿ: ದೇಶದ ವಾಣಿಜ್ಯ ಬ್ಯಾಂಕ್ಗಳಿಗಿಂತಲೂ ‘ಗ್ರಾಮೀಣ’ ಬ್ಯಾಂಕ್ಗಳು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಜನ-ಧನ’ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಖಾತೆ ತೆರೆಯುವಲ್ಲಿ ದಾಖಲೆ ಸೃಷ್ಟಿಸಿವೆ ಎಂದು ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ಗಳ ಒಕ್ಕೂಟದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ವೆಂಕಟೇಶ್ವರ ತಿಳಿಸಿದರು.
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಒಕ್ಕೂಟವು ನಗರದ ಬಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ವಿಶೇಷ ಮಹಾಸಭೆ’ಯಲ್ಲಿ ‘ಗ್ರಾ ಮೀಣಾಭಿವೃದ್ಧಿಯಲ್ಲಿ ಬ್ಯಾಂಕ್ಗಳ ಪಾತ್ರ ಕುರಿತು ಅವರು ಉಪನ್ಯಾಸ ನೀಡಿದರು.
ವಾಣಿಜ್ಯ ಬ್ಯಾಂಕ್ಗಳು ಈ ಖಾತೆ ತೆರೆಯಲು ಮೀನಮೇಷ ಎಣಿಸುತ್ತಿವೆ. ಅಲ್ಲಿಯ ವ್ಯವಸ್ಥಾಪಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳಿವೆ. ಇಂಥ ಆರೋಪಗಳಿಗೆ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರು ಗುರಿಯಾಗದೆ, ಈ ಯೋಜನೆ ಅಡಿ ಖಾತೆ ಹೊಂದುವ ಗ್ರಾಹಕರೊಂದಿಗೆ ಸಹಕರಿಸಬೇಕು ಎಂದು ಅವರು ಕೋರಿದರು.
ಗ್ರಾಮೀಣ ಬ್ಯಾಂಕಿನ ನೌಕರರಿಗೆ ನಿವೃತ್ತಿ ವೇತನ ಜಾರಿ ಕುರಿತು ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿದ್ದು ಎರಡು ವರ್ಷಗಳಿಂದ ಕಾನೂನು ಸಮರ ನಡೆಸಲಾಗುತ್ತಿದೆ ಎಂದರು.
ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಗೌರವ ಸಲಹೆಗಾರ ಎಸ್.ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಂಟಿ ಕ್ರಿಯಾ ಸಮಿತಿ ಸಂಚಾಲಕ ಗಣಪತಿ ಹೆಗಡೆ, ಆನಂದರೆಡ್ಡಿ, ಗಂಗಪ್ಪ ಪತ್ತಾರ, ಸೋಮಪ್ಪ, ಶರಣಗೌಡ ಬಿರಾದರ್, ರಾಜಶೇಖರ ,ಭದ್ರಾನಾಯ್ಕ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಗುರುಮೂರ್ತಿ ಸ್ವಾಗತಿಸಿದರು. ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಂಪಾಪತಿ ಕಾರ್ಯಕ್ರಮ ನಿರೂಪಿಸಿದರು.