ಕರಾವಳಿ ಕರ್ನಾಟಕದ ಜನಪದ ಕ್ರೀಡೆ ಕಂಬಳ. ಉತ್ತರದ ಬಾರ್ಕೂರಿನಿಂದ ದಕ್ಷಿಣದ ಕಾಸರಗೋಡಿನವರೆಗೆ ರೈತರು ತಮ್ಮ ಎರಡನೇ ಬೆಳೆ ಸುಗ್ಗಿ ಸಾಗುವಳಿಯ ಕೊನೆಯಲ್ಲಿ ಉಳುಮೆಯ ಕೋಣಗಳನ್ನು ಓಡಿಸುವುದು ಪುರಾತನ ಕಾಲದಿಂದ ನಡೆದುಬಂದ ಸಂಪ್ರದಾಯ. ಗಂಪ-+ಕಳ= ಕಂಬಳ (ಗಂಪ ಎಂದರೆ ತುಳು ಭಾಷೆಯಲ್ಲಿ ಕೆಸರು ಎಂದರ್ಥ. ಕಳ ಎಂದರೆ ಕಣ) ಹೀಗಾಗಿ ಕೆಸರು ಮಣ್ಣಿನಿಂದ ಕೂಡಿದ ಗದ್ದೆಗೆ ಕಂಬಳ ಎಂದು ಹೆಸರು. ನೂರಾರು ಸಾಂಪ್ರದಾಯಿಕ ನಂಬಿಕೆ, ಆಚರಣೆ, ಆರಾಧನೆಗಳ ಮುಖ್ಯ ಆಧಾರವಾಗಿರುವ ಕಂಬಳಾಚರಣೆಗೆ ಇದೀಗ ಆತಂಕದ ಕಾರ್ಮೋಡ ಕವಿದಿದೆ.
ತಮಿಳುನಾಡಿನ ಜಲ್ಲಿಕಟ್ಟು ಎನ್ನುವ ಹೋರಿ ಪಳಗಿಸುವ ಸ್ಪರ್ಧೆಯಲ್ಲಿ ಹಿಂಸೆ, ಸಾವು-ನೋವು ಸಂಭವಿಸಿದೆ. ಇದನ್ನು ನಿಷೇಧಿಸುವಂತೆ
ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಕಂಬಳಕ್ಕೂ ಅನ್ವಯಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಯ ಮಧ್ಯಪ್ರವೇಶದಿಂದ ಕಂಬಳಾಚರಣೆ ಇನ್ನಷ್ಟು ಕಷ್ಟ ಅನುಭವಿಸುವಂತಾಗಿದೆ. ಅಹಿಂಸಾತ್ಮಕವಾಗಿ ಕಂಬಳ ಆಚರಿಸುವ ಸಂಘಟನಾತ್ಮಕ ಪ್ರಯತ್ನಗಳ ನಡುವೆಯೇ, ಪ್ರಾಣಿ ಕ್ರೌರ್ಯ ತಡೆ ನಿಯಮ 1960ರ ಅನ್ವಯ ಪಶುಸಂಗೋಪನಾ ಇಲಾಖೆ ಮೂಲಕ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಆಡಳಿತಗಳು ಕಂಬಳಕ್ಕೆ ತಡೆ ನೀಡಿವೆ. ಹಿಂಸೆಯ ಹೆಸರಿನಲ್ಲಿ ಜಾರಿಗೆ ತಂದ ವಿವೇಚನಾರಹಿತವಾದ ಆಜ್ಞೆ ಇದು. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಾರದೆ ದಿಢೀರನೆ ಕರಾವಳಿ ಜನರು ಮತ್ತು ಸಂಸ್ಕೃತಿಯ ಮೇಲೆ ನಡೆಸಿದ ಗದಾಪ್ರಹಾರ.
ಬಾಂಧವ್ಯದ ಇತಿಹಾಸ: ಕಂಬಳ ಯಾಕೆ ಉಳಿಯಬೇಕು ಎಂದು ಹೇಳುವಾಗ ಅದರ ನೂರಾರು ವರ್ಷಗಳ ಇತಿಹಾಸ, ಜನರ ಜೀವನ, ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಬಾಂಧವ್ಯವನ್ನೂ ಗಮನಿಸಬೇಕಾಗುತ್ತದೆ. ಭತ್ತದ ಗದ್ದೆಯನ್ನು ಉಳುಮೆ ಮಾಡುವಾಗ, ಬಿತ್ತಿದ ಬೆಳೆ ನಿರ್ವಿಘ್ನವಾಗಿ ರೈತನ ಮನೆ ಸೇರಬೇಕಾದರೆ ದೈವ, ದೇವರ ಸಹಾಯ ಅತಿ ಅಗತ್ಯ ಎಂಬುದು ನಂಬಿಕೆ. ಇದಕ್ಕಾಗಿ ಭೂತಾರಾಧನೆ, ನಾಗಾರಾಧನೆ, ದೇವತಾರಾಧನೆ, ಪನಿಕುಲ್ಲುನು ಅಂತಹ ಅನೇಕ ಆರಾಧನಾತ್ಮಕ ಮತ್ತು ಆಚರಣಾತ್ಮಕ ವಿಧಿ ವಿಧಾನಗಳು ಜನರ ನಂಬಿಕೆ, ವಿಶ್ವಾಸಕ್ಕೆ ಪೂರಕವಾದವು.
ಸಮರ್ಥವಾದ ಕೋಣಗಳನ್ನು ಸಾಲಾಗಿ ನಿಲ್ಲಿಸಿ ಉಳುಮೆಯ ಕೊನೆಯಲ್ಲಿ ಪ್ರಾರಂಭಿಸಿದ ಕೋಣಗಳ ಓಟವೇ ಕಂಬಳ. ಈ ಓಟ ಮುಂದೆ
ಎರಡು ವಿಧ 1. ಸಾಂಪ್ರದಾಯಿಕ ಕಂಬಳ: ಧಾರ್ಮಿಕ ಮಹತ್ವ, ಸಾಮೂಹಿಕ ಪಾಲ್ಗೊಳ್ಳುವಿಕೆ, ಮನೆತನದ ಗೌರವ ಇವೆಲ್ಲವೂ ಸಾಂಪ್ರದಾಯಿಕ ಕಂಬಳಗಳಲ್ಲಿ ಎದ್ದು ಕಾಣುವ ಪ್ರಮುಖ ಅಂಶಗಳು. ಉತ್ತರದ ವಂಡಾರಿನ ಕಂಬಳ ಮತ್ತು ದಕ್ಷಿಣದ ಕೊಕ್ಕಡ್ಕೋರಿ ಕಂಬಳಗಳು ಸಾಂಪ್ರದಾಯಿಕ ಕಂಬಳಗಳಲ್ಲಿ ಅತ್ಯಂತ ಹೆಚ್ಚಿನ ಮಹತ್ವ ಪಡೆದಿವೆ. ಇವು ಆಯಾ ಪ್ರದೇಶಗಳ ಜಾತ್ರೆ ಕೂಡಾ. ಇಲ್ಲಿ ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಮಾರಾಟವೂ ಸಾಕಷ್ಟು ನಡೆಯುವುದು ವಿಶೇಷ. ಹೀಗಿರುತ್ತದೆ ಸ್ಪರ್ಧೆ ಕಂಬಳದಲ್ಲಿ 4 ಪ್ರಮುಖ ವಿಭಾಗಗಳಿವೆ |
ಆರೋಗ್ಯಕರ ಸ್ಪರ್ಧೆಗೆ ಕಾರಣವಾಯಿತು. ಗೌರವದ ದ್ಯೋತಕವೂ ಆಗಿ ಪ್ರತಿಷ್ಠೆಯ ಪಣವಾಯಿತು. ಸಮರ್ಥ ಕೋಣಗಳಿಗೆ ಎಳನೀರಿನ ಗೊನೆ, ಎಲೆ ಅಡಿಕೆಗಳನ್ನು ಬಹುಮಾನದ ರೂಪದಲ್ಲಿ ಕೊಟ್ಟು ಗೌರವಿಸುವ ಪದ್ಧತಿ ರೂಢಿಗೆ ಬಂತು. ಉಚಿತ ಭೋಜನದ ವ್ಯವಸ್ಥೆ, ಎಳನೀರು, ಕಬ್ಬಿನಕೋಲು, ಕೊಂಬು ಕಹಳೆ, ಬ್ಯಾಂಡು, ವಾಲಗ, ಕೋಣಗಳನ್ನು ಅಲಂಕರಿಸುವ ವಿವಿಧ ರೂಪಗಳು ಕಂಬಳವನ್ನು ಮತ್ತಷ್ಟು ಆಕರ್ಷಕಗೊಳಿಸಿದವು.
ಸೂತಕಾದಿಗಳಿಂದ ಕೂಡಿದ ವ್ಯಕ್ತಿಯಾಗಲಿ, ಆತನ ಕೋಣವಾಗಲಿ ಪಾವಿತ್ರ್ಯದ ದೃಷ್ಟಿಯಿಂದ ಕಂಬಳ ಗದ್ದೆಗೆ ಇಳಿಯುವಂತಿಲ್ಲ, ಕಂಬಳದ ದಿನ ನಿಗದಿಯಾದಂದಿನಿಂದ ವ್ರತಾಚರಣೆ, ಕಂಬಳಗದ್ದೆಯ ನೀರನ್ನು ಹಟ್ಟಿಗಳಿಗೆ ಪ್ರೋಕ್ಷಿಸುವುದು, ಕಂಬಳ ಗದ್ದೆಗೆ ಹರಕೆ ಒಪ್ಪಿಸುವುದು, ಸುತ್ತ ಬೆಳ್ಳಕ್ಕಿ ಹಾಕುವುದು, ಕಂಬಳ ಗದ್ದೆ ನಿರ್ಮಿಸಿ ದೇವಾಲಯಗಳಿಗೆ ದಾನಪತ್ರ ನೀಡುವುದು ಮೊದಲಾದ ವಿಶಿಷ್ಟ ಸಂಪ್ರದಾಯಗಳು ಈ ಕ್ರೀಡೆಯ ಮಹತ್ವ ಹೆಚ್ಚಿಸಿವೆ.
ಮೂಲ್ಕಿ ಸೀಮೆಯ ಅರಸು ಕಂಬಳವು ಸಾಂಪ್ರದಾಯಿಕ ಕಂಬಳವಾಗಿದ್ದು, ಆಧುನಿಕ ವ್ಯವಸ್ಥೆಗಳನ್ನು ಸೇರಿಸಿಕೊಂಡರೂ ಸಂಪ್ರದಾಯವನ್ನು ಉಳಿಸಿಕೊಂಡೇ ಬಂದಿದೆ. ಭಾಗವಹಿಸಿದ ಕೋಣಗಳಿಗೆ ಜೋಡು ಎಳನೀರು ಹಾಗೂ ವಿಜೇತ ಕೋಣಗಳಿಗೆ ಸೀಮೆಯ ಗೌರವವಾಗಿ ಎಲೆ ಅಡಿಕೆ, ಜೋಡು ಲಿಂಬೆ ಹುಳಿ ನೀಡಲಾಗುತ್ತದೆ. ಉಳಿದಂತೆ ಕಂಬಳ ಸಮಿತಿ ಚಿನ್ನದ ಪದಕ ನೀಡಿ ಗೌರವಿಸುತ್ತದೆ.
ಕಂಬಳಗದ್ದೆಯ ನಿರ್ಮಾಣದ ಕುರಿತು ತಾಳಿಪ್ಪಾಡಿ ಶಾಸನ, ಕಂಬಳಗದ್ದೆಯ ಉದ್ದಗಲ ಕುರಿತು ಕೊಲ್ಲೂರು ಶಾಸನ, ಕಂಬಳಾಚರಣೆ ಬಗ್ಗೆ ಸುಬ್ರಹ್ಮಣ್ಯದ ಕಲ್ಲಮಾಣೆಯ ಶಾಸನ, ಕಂಬಳಗದ್ದೆ ನಿರ್ಮಿಸಿ ಶಿವಾಲಯಕ್ಕೆ ದತ್ತಿ ನೀಡಿದ ಸೊರಾಲಿನ ಶಾಸನ, ಬಾರಕೂರಿನ ಶಾಸನಗಳಲ್ಲಿ ಕ್ರಿ.ಶ. 1400ರಿಂದ 1676ರ ತನಕ ಉಲ್ಲೇಖಗಳಿರುವುದರಿಂದ ಕಂಬಳದ ಪ್ರಾಚೀನತೆ, ಮಹತ್ವವನ್ನು ಅರಿತುಕೊಳ್ಳಬಹುದು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರೇರಣೆಯೊಂದಿಗೆ 1969ರಲ್ಲಿ ಕಾರ್ಕಳ ತಾಲ್ಲೂಕಿನ ಬಜಗೋಳಿಯಲ್ಲಿ ಎನ್.ಗುಣಪಾಲ ಜೈನ್, ಧರ್ಮರಾಜ ಜೈನ್ ಅವರ ನೇತೃತ್ವದಲ್ಲಿ ಇಡೀ ಕಂಬಳ ಕ್ಷೇತ್ರಕ್ಕೆ ಹೊಸ ತಿರುವು ನೀಡಿದ ‘ಲವ–ಕುಶ’ ಜೋಡುಕರೆ ಕಂಬಳ ಒಂದು ಮೈಲಿಗಲ್ಲು. ಕಂಬಳ ಸ್ಪರ್ಧೆಯ ವಿಭಾಗಗಳಾದ ಕೆನೆಹಲಗೆ, ಹಗ್ಗ, ಅಡ್ಡಹಲಗೆ, ನೇಗಿಲು ಎನ್ನುವ ನಾಲ್ಕು ವಿಭಾಗಗಳ ಸ್ಪರ್ಧೆಗಳನ್ನು ಒಂದೆಡೆ ಆರಂಭಿಸಿ 30 ವರ್ಷಗಳ ಕಾಲ ನಿರಂತರ ಯಶಸ್ವಿಯಾಗಿ ನಡೆಸಿದ ಕೀರ್ತಿ ಇಲ್ಲಿನದು.
ಹೊಸ ಆವಿಷ್ಕಾರ: ಉಡುಪಿ ಜಿಲ್ಲೆಯ ಅಡ್ವೆ ನಂದಿಕೂರಿನ ಕೋಟಿ ಚೆನ್ನಯ ಕಂಬಳದ ವ್ಯವಸ್ಥಾಪಕರಾದ ಪೊಳೆಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಅವರ ದೂರದರ್ಶಿತ್ವದಿಂದಾಗಿ ಈ ಕಂಬಳದಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಯಿತು.
ಕಂಬಳ ಸ್ಪರ್ಧೆ ಪಾರದರ್ಶಕವಾಗಿ ಮತ್ತು ವಿವಾದ ಇಲ್ಲದೆ ಜರುಗುವ ನೆಲೆಯಲ್ಲಿ ಮತ್ತೆ ಇದೇ ಕಂಬಳದಲ್ಲಿ ವಿಡಿಯೊ ಫಿನಿಶಿಂಗ್ ವ್ಯವಸ್ಥೆಗೊಳಿಸಲಾಯಿತು. ಇವೆರಡೂ ಸೇರ್ಪಡೆಗಳು ಕಂಬಳವನ್ನು ಅತ್ಯಾಕರ್ಷಕವಾಗಿಯೂ, ಪಾರದರ್ಶಕವಾಗಿಯೂ ನೆರವೇರಿಸುವಲ್ಲಿ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸಿದವು.
ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಪ್ರಯತ್ನದೊಂದಿಗೆ ಕಂಬಳ ಕ್ಷೇತ್ರದಲ್ಲಿ ಏರಿಯಲ್ ಚಿತ್ರೀಕರಣ, ಕರೆಯ (ಪಥ) ಮಧ್ಯದಲ್ಲಿ ರೋಪ್ ವೇ ಚಿತ್ರೀಕರಣ ಮೊದಲಾದ ಆವಿಷ್ಕಾರಗಳು ರೂಪುಗೊಂಡವು. ಇದೀಗ ಕಂಬಳ ತೀರ್ಪಿನ ಪಾರದರ್ಶಕತೆಯ ನೆಲೆಯಲ್ಲಿ ಕಾರ್ಕಳದ ಸ್ಕೈ ವ್ಯೂ ಸಂಸ್ಥೆಯ ರತ್ನಾಕರ್ ಎನ್. ಅವರ ಸಂಶೋಧನೆಯಿಂದಾಗಿ ‘ಲೇಸರ್ ಸ್ಕ್ರೀನ್ ನೆಟ್ವರ್ಕ್ ಸಿಸ್ಟಂ’ ಎಂಬ ಅತ್ಯಾಧುನಿಕ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಕಂಬಳಗಳಲ್ಲಿ ಅಳವಡಿಸಲಾಗಿದೆ. ಮುಂದಿನ ಹೆಜ್ಜೆಯಾಗಿ ‘ಎಲೆಕ್ಟ್ರಾನಿಕ್ ಟೈಮ್ ಸಿಸ್ಟಮ್’ಗಾಗಿ ಪ್ರಯತ್ನ ನಡೆದಿದೆ.
ವಿಡಿಯೊ ಫಿನಿಶಿಂಗ್ ಪದ್ಧತಿಯಿಂದಾಗಿ ಹೆಚ್ಚಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಆದರೂ ಪ್ರತಿ ಕಂಬಳದಲ್ಲಿ ನಾಲ್ಕಾರು ಸಂದರ್ಭಗಳಲ್ಲಿ ‘ಸಮ ಸಮ’ ಅಂಕ ಕೊಡುವುದು ಅನಿವಾರ್ಯ. ಕೆಲವು ಸಂದರ್ಭಗಳಲ್ಲಿ ಮೂರು ಮೂರು ಸಲ ‘ಸಮ ಸಮ’ ಬಂದ ಪ್ರಸಂಗಗಳಿವೆ. ಈ ನಿಟ್ಟಿನಲ್ಲಿ ಲೇಸರ್ ಸ್ಕ್ರೀನ್ ನೆಟ್ವರ್ಕ್ ಸಿಸ್ಟಮ್ನ ಆವಿಷ್ಕಾರ, ಸಮಸ್ಯೆಗಳಿಗೊಂದು ಉತ್ತಮ ಪರಿಹಾರ.
ಸಮಿತಿ ರಚನೆ: ಕಂಬಳವನ್ನು ಅತ್ಯಂತ ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿ ಮತ್ತು ಅಹಿಂಸಾತ್ಮಕವಾಗಿ ಸಂಘಟಿಸುವ ನೆಲೆಯಲ್ಲಿ 1989ರಲ್ಲಿ ಜಿಲ್ಲಾ ಕಂಬಳ ಸಮಿತಿ ಸ್ಥಾಪನೆಗೊಂಡಿತು. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ ಕಂಬಳ ನಿಯಮಗಳನ್ನು ಒಳಗೊಂಡ ಮಾರ್ಗದರ್ಶಿ ಪುಸ್ತಕ ನನ್ನ ನೇತೃತ್ವದಲ್ಲಿ ಪ್ರಕಟವಾಯಿತು. ಇದು ಕಂಬಳ ಕ್ಷೇತ್ರಕ್ಕೆ ಹೊಸ ತಿರುವು ನೀಡಿತು. ಕಂಬಳಗಳ ವಾರ್ಷಿಕ ದಿನಾಂಕ, ನೀತಿ ನಿಯಮದ ವಿಚಾರದಲ್ಲಿ ಸಮಿತಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ.
ಓಟಗಳು: ಕಂಬಳ ಓಟಗಾರರು 145 ಮೀಟರ್ ದೂರವನ್ನು 13.5 ಸೆಕೆಂಡ್ಗಳಲ್ಲಿ ಓಡುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ವ್ಯವಸ್ಥೆ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವಕರ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಹಿನ್ನೆಲೆಯಲ್ಲಿ ಅಕಾಡೆಮಿಯು ಸಮಾನ ಮನಸ್ಕರಾದ 11 ಸದಸ್ಯರ ಸಹಕಾರ, ದಾನಿಗಳ ಕೊಡುಗೆಯೊಂದಿಗೆ ಕಳೆದ 4 ವರ್ಷಗಳಿಂದ ಶಿಬಿರಗಳನ್ನು ನಡೆಸಿ ಸುಮಾರು 110 ಯುವಕರಿಗೆ ವೈಜ್ಞಾನಿಕವಾಗಿ ತರಬೇತಿ ನೀಡಿದೆ.
ಕೋಣಗಳ ಸಾಕಣೆ ವೆಚ್ಚ ಮತ್ತು ಓಟಗಾರರ ಸಂಭಾವನೆ ಅತಿಯಾಗುತ್ತಿದ್ದು, ಕಂಬಳ ಸಂಘಟನೆ ಮತ್ತಷ್ಟು ದುಬಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ, ಸಹಕಾರ, ಪ್ರೋತ್ಸಾಹ ಅತಿ ಅಗತ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಬ್ಬರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾತಿ, ಮತ ಭೇದವಿಲ್ಲದೆ, ಶ್ರೀಮಂತರು, ಬಡವರು ಎಂಬ ತಾರತಮ್ಯ ಇಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಕಂಬಳೋತ್ಸವಗಳಲ್ಲಿ ಕುಳಿತು ಆನಂದಿಸುವ ಕರಾವಳಿ ಕರ್ನಾಟಕದ ಏಕೈಕ ಜನಪದ ಕ್ರೀಡೆ ಕಂಬಳ ತನ್ನ ಮೂಲ ಸ್ವರೂಪದಲ್ಲಿ ಉಳಿಯಬೇಕು. ಅಹಿಂಸಾತ್ಮಕವಾಗಿ ಸಂಘಟಿತವಾಗಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ನಡೆಯುತ್ತಿವೆ.
ಕಂಬಳ ಎಂದಾಕ್ಷಣ ಕೋಣಗಳ ಓಟದ ಸ್ಪರ್ಧೆ ಎಂಬ ತಪ್ಪು ಕಲ್ಪನೆ ಇದೆ. ಟಿ.ವಿ ಮಾಧ್ಯಮಗಳಲ್ಲಿ ತೋರಿಸುವ ಹೊಡೆಯುವ ದೃಶ್ಯಗಳು ಇಂದು, ನಿನ್ನೆಯವಲ್ಲ. ಕಂಬಳಗಳಲ್ಲಿ ಈಗ ಸಾಕಷ್ಟು ಸುಧಾರಣೆಗಳಾಗಿವೆ. ಅಹಿಂಸಾತ್ಮಕವಾದ ಆಚರಣೆಗಾಗಿ ಸಾಕಷ್ಟು ಮಾರ್ಗದರ್ಶಿ ಸೂತ್ರಗಳೊಂದಿಗೆ ಪ್ರಾಣಿ ಕ್ರೌರ್ಯ ತಡೆ ನಿಯಮ 1960 ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಜಿಲ್ಲಾ ಕಂಬಳ ಸಮಿತಿ ಹಾಗೂ ಅಕಾಡೆಮಿಯ ವತಿಯಿಂದ ಎರಡೆರಡು ಪ್ರಾಯೋಗಿಕ ಕಂಬಳಗಳನ್ನು ಹಮ್ಮಿಕೊಂಡು, ಅಹಿಂಸಾತ್ಮಕವಾದ ಕಂಬಳ ಆಚರಣೆಗೆ ಶೇ 100ರಷ್ಟು ಒತ್ತು ನೀಡಲಾಗಿದೆ. ಕಂಬಳ ಸಮಿತಿಯು ಬೆತ್ತವಿಲ್ಲದೆ ಕಂಬಳ ನಡೆಸುವ ನಿರ್ಧಾರದೊಂದಿಗೆ ಕಾರ್ಯಪ್ರವೃತ್ತವಾಗಿದೆ.
ಕೋಣಗಳು ಓಡುವ ಪ್ರಾಣಿಗಳಲ್ಲ ಎನ್ನುವ ವಾದ ಪ್ರಾಣಿ ದಯಾ ಮಂಡಳಿಯದು. ಎಲ್ಲ ಕೋಣಗಳೂ ಓಟದ ಸ್ಪರ್ಧೆಯ ಕೋಣಗಳಾಗಲು ಸಾಧ್ಯವಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. 100 ಕೋಣಗಳಲ್ಲಿ ಒಂದೆರಡು ಕೋಣಗಳನ್ನು ಮಾತ್ರ ಅವುಗಳ ಶಾರೀರಿಕ ರಚನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಗದ್ದೆ ಬೇಸಾಯದ ಸಮಯದಲ್ಲಿ, ಉಳುಮೆ ಮಾಡುವ ಸಂದರ್ಭದಲ್ಲಿ ಉಳುಮೆಗಾಗಿ ಆಗೊಮ್ಮೆ, ಈಗೊಮ್ಮೆ ಹೊಡೆಯಲೇಬೇಕಾಗುತ್ತದೆ. ಇದು ಕ್ರೌರ್ಯದ ಹೊಡೆತವಲ್ಲ. ಹಿಂಸೆಯ ಉದ್ದೇಶ ಇಲ್ಲಿಲ್ಲ. ಇದು ಶತ ಶತಮಾನಗಳ ಕತೆ. ಕೋಣಗಳಿಗೆ ಪೌಷ್ಟಿಕ ಆಹಾರ ನೀಡಿ ಮಕ್ಕಳಂತೆ ಪ್ರೀತಿಸುತ್ತಾರೆ. ಕೃಷಿ ಸಾವಯವ ಗೊಬ್ಬರ ರೈತನ ಬದುಕನ್ನು ಹಸನುಗೊಳಿಸುತ್ತದೆ. ಹೀಗೆ ನಮ್ಮ ಹಟ್ಟಿಯಲ್ಲಿ ಕುಟುಂಬದ ಸದಸ್ಯರಂತೆ ಸಾಕುವ ಪ್ರಾಣಿಗಳಿಗೆ ಉದ್ದೇಶಪೂರ್ವಕ ಹಿಂಸೆ ಸಾಧ್ಯವೇ?
ದಕ್ಷಿಣ ಕನ್ನಡ, ಉಡುಪಿ ಹಾಗೂ ತುಳು ಸಂಸ್ಕೃತಿಯನ್ನು ಒಳಗೊಂಡ ಕಾಸರಗೋಡಿನಲ್ಲಿ 200ಕ್ಕೂ ಹೆಚ್ಚು ಆರಾಧನಾತ್ಮಕ, ಆಚರಣಾತ್ಮಕ ವಿಧಿ ವಿಧಾನಗಳಿಂದ ಕೂಡಿದ ಸಾಂಪ್ರದಾಯಿಕ ಕಂಬಳಗಳಿವೆ. ಕಂಬಳದ ಬಗ್ಗೆ ಪ್ರಾಥಮಿಕ ಅರಿವೂ ಇಲ್ಲದ ಕರಾಳ ಕಾನೂನು ಈ ನೆಲದ ಸಂಸ್ಕೃತಿಗೆ ಮಾರಕ. ಇದರಿಂದ ಕನಿಷ್ಠ 5 ಸಾವಿರಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗುತ್ತಾರೆ. ನೂರಾರು ಓಟಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದ ಕಂಬಳ ಉತ್ಸವವನ್ನು ಹೆದರಿ ಕದ್ದು ಮುಚ್ಚಿ ಆಚರಿಸುವ ಶೋಚನೀಯ ಸ್ಥಿತಿ ಬಂದೊದಗುವುದು ಸರಿಯಲ್ಲ.
(ಲೇಖಕರು ವಿಶ್ರಾಂತ ಪ್ರಾಚಾರ್ಯರು, ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಸಂಚಾಲಕರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.