ನವದೆಹಲಿ (ಪಿಟಿಐ): ನೈರ್ಮಲ್ಯದ ಕೊರತೆಯಿಂದ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ದೇಶದೆಲ್ಲೆಡೆ ಜನಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಶುಕ್ರವಾರ ಇಲ್ಲಿ ಭೇಟಿ ಮಾಡಿದ ಬಿಲ್ ಗೇಟ್ಸ್ ದೇಶದಲ್ಲಿ ನೈರ್ಮಲ್ಯ ಕಾಪಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಶೌಚಾಲಯ ಮತ್ತು ಒಳಚರಂಡಿ ನಿರ್ವಹಣೆಗೆ ವಿನೂತನ ತಂತ್ರಜ್ಞಾನ ಅಳವಡಿಕೆ, ಸ್ಥಳೀಯ ಮಟ್ಟದಲ್ಲೇ ತ್ಯಾಜ್ಯ ವಿಲೇವಾರಿ ನಡೆಸುವ ವಿಕೇಂದ್ರೀಕೃತ ಒಳಚರಂಡಿ ವ್ಯವಸ್ಥೆಗೆ ಉತ್ತೇಜನ, ನೈರ್ಮಲ್ಯ ಕ್ಷೇತ್ರಕ್ಕೆ ಬಲ ನೀಡುವುದು ಮತ್ತು ಶೌಚಾಲಯ ಬಳಕೆಗೆ ಉತ್ತೇಜನ ನೀಡುವ ಒಟ್ಟು ನಾಲ್ಕು ಪ್ರಮುಖ ಕ್ಷೇತ್ರಗಳಿಗೂ ನೆರವು ವಿಸ್ತರಿಸಲು ಸಚಿವರೊಂದಿಗಿನ ಚರ್ಚೆಯಲ್ಲಿ ಬಿಲ್ ಗೇಟ್ಸ್ ಸಮ್ಮತಿಸಿದರು.
ದೇಶದ ಹಿತ ಕಾಪಾಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆಯೇ ಎಂಬುದು ಅದರ ಮುಂದಿರುವ ನಿಜವಾದ ಪರೀಕ್ಷೆ. ಜನರಿಗೆ ಹಿತವಾಗದಿದ್ದರೂ ದೇಶಕ್ಕೆ ಹಿತವಾಗುವ ನಿರ್ಧಾರಗಳನ್ನು ಕೈಗೊಳ್ಳದಿದ್ದರೆ ಏನು ಉಪಯೋಗ ಎಂದು ಅವರು ಪ್ರಶ್ನಿಸಿದರು.
ಬಿಲ್ ಗೇಟ್ಸ್–ಮೆಲಿಂಡಾ ದಂಪತಿಯ ದಾನ ಧರ್ಮಕುರಿತು ಲೇಖಕ ಚೇತನ್ ಭಗತ್ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಎಐಐಎಂಎಸ್, ಐಐಟಿ ಹಾಗೂ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಧಾನಿ ಭೇಟಿ: ‘ಮೈಕ್ರೋಸಾಫ್ಟ್’ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ತಮ್ಮ ಪತ್ನಿ ಮೆಲಿಂಡಾ ಗೇಟ್ಸ್ ಜತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದರು.
ತುರ್ತು ನೆರವು ನಿಧಿ: ಪ್ರವಾಹದಿಂದ ನಲುಗಿರುವ ಜಮ್ಮು ಕಾಶ್ಮೀರಕ್ಕೆ ಬಿಲ್ ಗೇಟ್ಸ್ ದಂಪತಿ ಸುಮಾರು ₨4.6 ಕೋಟಿ ಪರಿಹಾರವನ್ನು ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.