ನವದೆಹಲಿ: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ರಾಜ್ಯದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ಪುನಃ ನಿರಾಕರಿಸಿತು.
ಜನಾರ್ದನರೆಡ್ಡಿ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಎಲ್. ದತ್ತು ನೇತೃತ್ವದ ತ್ರಿಸದಸ್ಯ ಪೀಠವು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು.
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ‘ಓಬಳಾಪುರಂ ಮೈನಿಂಗ್ ಕಂಪೆನಿ’(ಒಎಂಸಿ) ಪ್ರಕರಣದಲ್ಲಿ ಜಾಮೀನು ಕೊಡಬೇಕೆಂದು ಅರ್ಜಿದಾರರ ಪರ ವಕೀಲ ಸುಶೀಲ್ ಕುಮಾರ್ ಮನವಿ ಮಾಡಿದರು. ಈ ಪ್ರಕರಣದ ವಿಚಾರಣೆ 6 ತಿಂಗಳೊಳಗೆ ಮುಗಿಯದಿದ್ದರೆ ಅರ್ಜಿದಾರರು ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಪೀಠ ತಿಳಿಸಿತು.
ಜನಾರ್ದನರೆಡ್ಡಿ ಅವರ ಮೇಲಿರುವ ಇನ್ನೂ ಐದು ಪ್ರಕರಣಗಳಲ್ಲಿ ಮಾಡಲಾಗಿರುವ ಆರೋಪಗಳು ಹೆಚ್ಚುಕಡಿಮೆ ಒಂದೇ ಸ್ವರೂಪದ್ದಾಗಿವೆ. ಎಲ್ಲ ಪ್ರಕರಣಗಳ ನಡುವೆ ಸಂಬಂಧವಿರುವುದರಿಂದ ಜಾಮೀನು ಕೊಡಬೇಕೆಂದು ಸುಶೀಲ್ ಕುಮಾರ್ ವಾದಿಸಿದರು.
ಈ ವಾದ ಆಲಿಸಿದ ನ್ಯಾಯಪೀಠ ಆರೋಪಿಗೆ ಜಾಮೀನು ಕೊಡಲು ಸಾಧ್ಯವಿಲ್ಲ ಎಂದು ಖಚಿತವಾಗಿ ಹೇಳಿತು.