ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನಿನಲ್ಲಿ ಕನ್ನಡಿಗರ ಅಣು ಬಾಂಬ್‌

Last Updated 4 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅದು 1939ರ ಸೆಪ್ಟೆಂಬರ್‌ 2ರ ಸಮಯ. ಐದು ವರ್ಷಗಳ ಕಾಲ ಸುದೀರ್ಘವಾಗಿ ವಿಶ್ವದ ದ್ವಿತೀಯ ಮಹಾಯುದ್ಧ ನಡೆದ ವಿಷಮ ಗಳಿಗೆಯದು. ಜಪಾನಿನ ಹಿರೋಶಿಮಾ- ನಾಗಾಸಾಕಿ ಮೇಲೆ ಅಣು ಬಾಂಬ್ ದಾಳಿ ನಡೆಸಿದ್ದ ಅಮೆರಿಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಅಣು ಬಾಂಬ್‌ನಿಂದ ಜನ ತತ್ತರಿಸಿ ಹೋಗಿದ್ದರು.

ಈ ಭಯಾನಕ, ಭೀಭತ್ಸ ಚಿತ್ರಣವನ್ನು ತೈಲವರ್ಣದ ಮೂಲಕ ಕುಂಚದಲ್ಲಿ ಮೂಡಿಸಿದ್ದಾರೆ ಪ್ರಸಿದ್ಧ ಕಲಾವಿದ ಹುಲಸೋಗಿಯ ಪ್ರೊ.ಟಿ.ಬಿ.ಸೊಲಬಕ್ಕನವರ್. ಇದಕ್ಕೀಗ ಜಪಾನಿನ ಮನ್ನಣೆ. ‘ಅಣು ಬಾಂಬ್ ಮಹಾಮಾರಿ’ ಎಂದು ಬಿಂಬಿಸಿದ ಈ ಚಿತ್ರದ ಸಿ.ಡಿಯ ಪ್ರದರ್ಶನ ಜಪಾನಿನ ಹಿರೋಶಿಮಾದಲ್ಲಿ ನಾಳೆ (ಬುಧವಾರ) ನಡೆಯಲಿದೆ. ಈ ಮೂಲಕ ಕನ್ನಡದ ಕಲೆ ವಿದೇಶದಲ್ಲಿ ಮಿಂಚಲಿದೆ.

120/4 ಅಡಿ ಉದ್ದದ ಈ ತೈಲವರ್ಣ ಚಿತ್ರದಲ್ಲಿ ಭೂಮಿ ಮತ್ತು ವಿಶ್ವ ಸಂಸ್ಕೃತಿ ನಾಶ ಆಗುವ ಕಾರಣವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. 1986ರ ಸೆಪ್ಟೆಂಬರ್ 7ರಿಂದ ನವೆಂಬರ್ 5ರವರೆಗೆ ಎರಡು ತಿಂಗಳ ಕಾಲ ದಾವಣಗೆರೆ ವಿದ್ಯಾರ್ಥಿನಿಲಯದಲ್ಲಿ ಸೊಲಬಕ್ಕನವರ್‌ ಈ ಚಿತ್ರವನ್ನು ರಚಿಸಿದ್ದಾರೆ. ಇದಕ್ಕೀಗ 28 ವರ್ಷದ ಇತಿಹಾಸ.

ಸೊಲಬಕ್ಕನವರ್‌ ನೇತೃತ್ವದ ಸಮುದಾಯ ಸಂಘಟನೆ ‘ನೂರು ಅಡಿಗಳ ಬಣ್ಣದ ನಡೆ, ಅಣು ಸಮರಕ್ಕೆ ಜನತೆಯ ತಡೆ’ ಎಂಬ ಘೋಷಣೆಯೊಂದಿಗೆ ಕರ್ನಾಟಕದ 60 ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ತೈಲ ವರ್ಣ ಚಿತ್ರದ ಪ್ರದರ್ಶನ ವ್ಯವಸ್ಥೆ ಮಾಡಿತ್ತು. ಚಿತ್ರಕಲೆ ಆಧರಿಸಿ ನಾಡಿನ ಕವಿಗಳು ಕಾವ್ಯಗಳನ್ನು, ನಾಟಕಕಾರರು ನಾಟಕಗಳನ್ನು ರಚಿಸಿ, ನಿರ್ದೇಶಿಸುವ ಮೂಲಕ ರಾಜ್ಯದಾದ್ಯಂತ ಪ್ರದರ್ಶಿಸಿ ಜಾಥಾಕ್ಕೆ ಸಾಥ್ ನೀಡಿದ್ದರು.

ಈ ಘೋಷಣೆ ನಾಡಿನಾದ್ಯಂತ ಮೊಳಗಿತ್ತು. ದೆಹಲಿಯ ನೆಹರೂ ವಿಶ್ವವಿದ್ಯಾಲಯ ಸೇರಿದಂತೆ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ತೈಲ ವರ್ಣ ಚಿತ್ರ ಪ್ರದರ್ಶನಗೊಂಡಿತ್ತು. ಚಿತ್ರಕಲೆ ಮೂಲಕ ನಡೆದ ವಿಶ್ವದ ಮೊದಲ ಜಾಥಾ ಆಗಿತ್ತು ಎಂಬ ಹೆಗ್ಗಳಿಕೆ ಪಡೆದಿತ್ತಲ್ಲದೆ ಕಲಾ ವಿಮರ್ಶಕರಿಂದ ‘ಚಿತ್ರ ಮಹಾಕಾವ್ಯ’ಎಂದು ಬಣ್ಣಿಸಲ್ಪಟ್ಟಿತ್ತು.
‘ನಾವು ನೀವು ಇಲ್ಲವಾಗುವ ಮೂರನೇ ಮಹಾಯುದ್ಧ ಆಗಬಾರದೆಂಬುದೇ ಈ ಜಾಥಾ ಜನಾಂದೋಲನದ ಮಹಾತ್ವಾಕಾಂಕ್ಷೆ ಆಗಿದೆ’ ಎನ್ನುವುದು ಸಂಘಟನೆಯ ನುಡಿ.

ಹಾವೇರಿ ಜಿಲ್ಲೆಯ ಶಿಗ್ಗಾವಿಯ ಬಳಿಯ ಉತ್ಸವ ಗಾರ್ಡ್‌ನ್‌ನಲ್ಲಿ ತೈಲ ಚಿತ್ರದ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ. ಜಪಾನಿನ ಹಿರೋಶಿಮಾದಲ್ಲಿ ಇದೇ ಎರಡರಿಂದ ಆರಂಭವಾಗಿ 9ರವರೆಗೆ ನಡೆಯಲಿರುವ ‘ಎ ಮತ್ತು ಬಿ ಬಾಂಬ್ (ಅಟಾಮಿಕ್ ಮತ್ತು ಹೈಡ್ರೋಜನ್)ಗಳ ವಿರುದ್ಧದ ವಿಶ್ವ ಶಾಂತಿ ಸಮ್ಮೇಳನ’ದಲ್ಲಿ ಪ್ರದರ್ಶನಗೊಳ್ಳಲಿದೆ.

ಕಾರವಾರದ ಸಾಮಾಜಿಕ ಚಿಂತನೆ ಲೇಖಕಿ ಯಮುನಾ ಗಾಂವ್ಕರ್, ಒಡಿಶಾದ ವಿಷ್ಣು ಚರಣ್ ಮೊಹಾಂತಿ ಅವರು ಭಾರತದ ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದಾರೆ. ನಾಳೆ ಯಮುನಾ ಗಾಂವ್ಕರ್ ಅವರು ತೈಲ ಚಿತ್ರದ ಸಿ.ಡಿಯನ್ನು ಪ್ರದರ್ಶಿಸಲಿದ್ದಾರೆ.

ಪೇಂಟಿಂಗ್ ಕುರಿತು...
ಈ ತೈಲವರ್ಣದ ಕುರಿತು ವಿವರಿಸುವಾಗ ‘ಚಿತ್ರ’ ಎಂಬ ಪದ ಯಾಕೋ ಸಂಕುಚಿತ ಎನಿಸುವುದು. ಅಷ್ಟೊಂದು ಗಾಢ ಪರಿಣಾಮವನ್ನು ನೋಡುಗರಲ್ಲಿ ಹರಿಬಿಡುವ ಅಪೂರ್ವ ಐತಿಹಾಸಿಕ ಪೇಂಟಿಂಗ್ ಅದು. ಒಂದು ಪೇಂಟಿಂಗ್ ನೀಡುವ ಭಾವೋತ್ಕರ್ಷದ ಬಣ್ಣದ ರೂಪವನ್ನು, ಸೌಂದರ್ಯೋಪಾಸನೆಯ ಸಾಂದರ್ಭಿಕತೆ ದೃಶ್ಯಗಳನ್ನು ಮೀರಿರುವುದು ಇದರ ವಿಶೇಷತೆ.

‘ಆ ಚಿತ್ರವನ್ನು  ಹರಡಿದರೆ ಇಡೀ ಗ್ಯಾಲರಿಯನ್ನೇ ಆವರಿಸಿಕೊಂಡು ಭೂ ಮಂಡಲದ ಹುಟ್ಟು, ಜೀವಿಗಳ ವಿಕಸನ ಜಲಚರಗಳ, ಪ್ರಾಣಿ, ಪಕ್ಷಿ, ಮನುಷ್ಯನ ಆದಿ ಅಂತ್ಯದ ಬದುಕನ್ನು ಅದರ ಮಧ್ಯದ ಅವನ ಆಸೆ, ಆಕಾಂಕ್ಷೆಗಳು, ಅಧಿಕಾರ ದುರಾಸೆಗಳನ್ನು ಅದರ ಪರಿಣಾಮದ ಯುದ್ಧಗಳು, ಅದರ ಭೀಕರತೆಯನ್ನು ಕಲಾತ್ಮಕವಾಗಿ ಕಾವ್ಯದ ರೂಪದಲ್ಲಿ ಹೇಳುತ್ತಾ ಒಂದು ಕವಿತೆಯೋ, ಕವನಸಂಕಲನವೋ ಆಗಿ ಉಳಿಯದೇ ಅದೊಂದು ಮಹಾಕಾವ್ಯದಂತೆ’ ಎಂದು ವರ್ಣಿಸಿದ್ದಾರೆ ಸಾಹಿತಿ ಬಸವರಾಜ ಕಟ್ಟೀಮನಿ.

ಯುದ್ಧದ ಭೀಕರತೆಯ ಕರಾಳತೆಯನ್ನು ಮನಕಲುಕುವಂತೆ ಚಿತ್ರಿಸುವುದರಲ್ಲಿ ಪೇಂಟಿಂಗ್ ಯಶಸ್ವಿಯಾಗಿದೆ. ಒಂದೆಡೆ ಅಣುಬಾಂಬ್ ಹೊತ್ತ ಹದ್ದಿನಾಕಾರದ ಹಕ್ಕಿಯೊಂದು ಭೂಮಿಯ ಮೇಲೆ ಬಾಂಬ್‌ಗಳ ಮಳೆಗರೆಯುತ್ತಿದ್ದರೆ, ಭೂಮಿಯ ಸಕಲ ಜೀವರಾಶಿಗಳೊಂದಿಗೆ ಮನುಷ್ಯನು ಇಲ್ಲವಾಗುವ ಭೀಕರತೆ ಇನ್ನೊಂದೆಡೆ. ಶಾಂತಿದೂತ ಪಾರಿವಾಳಗಳ ಹಿಂಡು ಚಿಗುರುಗಳನ್ನು ಕೊಕ್ಕಲ್ಲಿ ಹಿಡಿದು ಹಾರುವ ದೃಶ್ಯ ಮತ್ತೊಂದೆಡೆ. ಇವನ್ನು ನೋಡುತ್ತಿದ್ದರೆ ಯುದ್ಧವಿರೋಧಿ ಬೀಜವೊಂದು ನೋಡುಗನ ಮನದಲ್ಲಿ ಮೊಳೆಯುತ್ತದೆ.

   120 ಅಡಿ ಉದ್ದಕ್ಕೂ ಎಲ್ಲಿಯೂ ಈ ಚಿತ್ರ ಬಿಡಿಬಿಡಿಯಾಗದೆ, ಭೂಮಂಡಲದ ಚಿತ್ರದೊಂದಿಗೆ ಯುದ್ಧವಿರೋಧಿಯಾಗಿ ಮೂಡಿ ನಮ್ಮೆದೆಯ ಗೂಡಲ್ಲಿ ಶಾಂತಿಪಾರಿವಾಳಗಳು ರೆಕ್ಕೆ ಬಿಚ್ಚಿ ಹಾರಿದಂತಹ ಅನುಭವ ನೀಡುತ್ತದೆ.

ಸೊಲಬಕ್ಕನವರ ಕುರಿತು...
ಡಾ.ಟಿ.ಬಿ.ಸೊಲಬಕ್ಕನವರ ಅವರು ದಾವಣಗೆರೆಯ ಲಲಿತ ಕಲಾ ಮಹಾ ವಿದ್ಯಾಲಯದಲ್ಲಿ 20 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಏಳು ರಾಜ್ಯಗಳಲ್ಲಿ ಒಳಾಂಗಣ, ಹೊರಾಂಗಣ ಉದ್ಯಾನ ಸಹ ರಚಿಸಿದ್ದಾರೆ. ಪ್ರಸಕ್ತ ಉತ್ಸವ ಗಾರ್ಡನ್‌ನ ರೂವಾರಿಯಾಗಿದ್ದಾರೆ. ಈ ಗಾರ್ಡನ್ ಈಗಾಗಲೇ ಎಂಟು ವಿಶ್ವ ದಾಖಲೆಗಳಲ್ಲಿ ಸೇರ್ಪಡೆಯಾಗಿದೆ.

ಉತ್ಸವ್ ರಾಕ್ ಗಾರ್ಡನ್‌’ನಲ್ಲಿ ಇದರ ನಿರಂತರ ಪ್ರದರ್ಶನಕ್ಕಾಗಿ ವಿಶಿಷ್ಟ ಗ್ಯಾಲರಿ ರೂಪಗೊಳ್ಳುವ ಯೋಜನೆ ನಡೆಯುತ್ತಿದೆ. ಈ ತೈಲವರ್ಣದ ಕುರಿತು ಹಲವಾರು ಕವಿತೆಗಳು ರಚನೆಗೊಂಡಿವೆ. ಲಿಂಗದೇವರು ಹಳೆಮನೆಯ ವರು‘ಜನತೆ’ ಎಂಬ ನಾಟಕ ರಚಿಸಿ ರಾಜ್ಯದಾದ್ಯಂತ ಅಣುವಿರೋಧಿ ಜನ ಜಾಗೃತಿ ಮೂಡಿಸಿದ್ದೊಂದು ಗಮನಾರ್ಹ ದಾಖಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT