ನವದೆಹಲಿ: ಕಾಂಗ್ರೆಸ್ ನಾಯಕನ ವಿರುದ್ಧ ಜಯಂತಿ ನಟರಾಜನ್ ಆರೋಪ ಮಾಡಿರುವುದು ನೋವಿನ ವಿಚಾರ. ಒಂದೇ ಒಂದು ಚುನಾವಣೆ ಗೆಲ್ಲದೆ, ನಾಲ್ಕು ಅವಧಿಗೆ ರಾಜ್ಯಸಭೆ ಸದಸ್ಯತ್ವ, ಹತ್ತು ವರ್ಷ ಪಕ್ಷದ ವಕ್ತಾರರ ಸ್ಥಾನ ಮತ್ತು ಮಂತ್ರಿ ಪದವಿ ಅನುಭವಿಸಿದ ಬಳಿಕ ಹೈಕಮಾಂಡ್ ಮೇಲೆ ಆರೋಪ ಮಾಡಿರುವುದು ಅವಕಾಶವಾದಿ ಮತ್ತು ಆಷಾಡಭೂತಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ.
ಲೋಕಸಭೆ ಚುನಾವಣೆಗೆ ನೂರು ದಿನ ಮೊದಲು ಜಯಂತಿ ನಟರಾಜನ್ ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡಲಾಗಿದೆ. ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡುವ ನಿರ್ಧಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರೂ ಸೇರಿ ಕೈಗೊಂಡಿದ್ದು. ಅವರನ್ನು ಏಕೆ ಕೈಬಿಡಲಾಯಿತು ಎಂದು ಅವರಿಗೂ ಗೊತ್ತಿದೆ.
ಆಗ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರವನ್ನು ಈಗ ಬಹಿರಂಗಪಡಿಸುವ ಅಗತ್ಯವಾದರೂ ಏನಿತ್ತು? ದೆಹಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಪತ್ರವನ್ನು ಬಹಿರಂಗಪಡಿಸಲಾಗಿದೆ. ಜಯಂತಿ ನಟರಾಜನ್ ವಿರುದ್ಧ ದಾಖಲೆ ಹೊಂದಿರಬಹುದಾದ ರಾಜಕೀಯ ನಾಯಕರು ಅವರನ್ನು ಬಳಸಿಕೊಳ್ಳುತ್ತಿದ್ದಾರೆ.
ಜಯಂತಿ ನಟರಾಜನ್ ಸಚಿವೆಯಾಗಿದ್ದಾಗ ಯಾರು ‘ಜಯಂತಿ ತೆರಿಗೆ’ ಎಂಬ ವಾಕ್ಯಗಳನ್ನು ಪ್ರಯೋಗಿಸಿ ಗೇಲಿ ಮಾಡಿದ್ದರೋ ಅದೇ ಜನ ರಾಜಕೀಯ ಲಾಭಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ‘ಹೊಸ ರಾಜಕೀಯ ನೇತಾರರ ಕೈಗೊಂಬೆ’ಯಾಗಿ ಅವರು ವರ್ತಿಸುತ್ತಿದ್ದಾರೆ ಎಂದು ಅಭಿಷೇಕ್ ಸಿಂಘ್ವಿ ದೂರಿದರು.