ನವದೆಹಲಿ (ಪಿಟಿಐ): ಬೆಂಗಳೂರಿನಲ್ಲಿ ನಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಹತ್ತು ದಿನಗಳ ಕಾಲ ತಡೆ ನೀಡಿದೆ.
ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ತಡೆ ನೀಡಿದ ನ್ಯಾಯಮೂರ್ತಿಗಳಾದ ಬಿ.ಎಸ್.ಚೌಹಾಣ್ ಹಾಗೂ ಎ.ಕೆ.ಸಿಕ್ರಿ ಅವರನ್ನು ಒಳಗೊಂಡ ಪೀಠ, ವಿಚಾರಣಾ ನ್ಯಾಯಾಲಯದಲ್ಲಿರುವ ಸಿವಿಲ್ ಪ್ರಕರಣಗಳ ವಿಚಾರಣೆ ಮುಂದುವರಿಯಲಿದೆ ಎಂದು ಹೇಳಿತು.
‘ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ನಾವು 10 ದಿನ ನಿಲಂಬನೆಯಲ್ಲಿ ಇಡುತ್ತಿದ್ದೇವೆ. ಆದರೆ ಸಿವಿಲ್ ಪ್ರಕರಣಗಳ ವಿಚಾರಣೆ ಮುಂದುವರಿಯಲಿದೆ ಎಂದು ಸ್ಪಷ್ಟ ಪಡಿಸುತ್ತೇವೆ’ ಎಂದು ಹೇಳಿದ ಪೀಠ ಮುಂದಿನ ವಿಚಾರಣೆಯನ್ನು ಜೂನ್ 6ಕ್ಕೆ ನಿಗದಿ ಪಡಿಸಿತು.
ಜಯಲಲಿತಾ ಅವರಿಗೆ ಸೇರಿದ ಅಕ್ರಮ ಆಸ್ತಿ ಎನ್ನಲಾದ ಕೆಲವು ಸ್ವತ್ತುಗಳು ತಮಗೆ ಸೇರಿದವು ಎಂದು ಹಲವು ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದ ಸಿವಿಲ್ ಪ್ರಕರಣಗಳು ನ್ಯಾಯಾಲಯದಲ್ಲಿವೆ.