ಬೆಂಗಳೂರು: ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಇತರ ಮೂವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸುತ್ತಿರುವ ಭವಾನಿ ಸಿಂಗ್ ಅವರು ಶುಕ್ರವಾರ ತಮ್ಮ ವಾದ ಪೂರೈಸಿದರು.
ಇದರಿಂದಾಗಿ ಈ ಪ್ರಕರಣದಲ್ಲಿನ ವಾದ ಪ್ರತಿವಾದ ಮುಕ್ತಾಯದ ಹಂತ ತಲುಪಿದೆ. ಬಿಜೆಪಿಯ ಹಿರಿಯ ನಾಯಕ ಮತ್ತು ಈ ಪ್ರಕರಣದ
ಮೂಲ ದೂರುದಾರರಾದ ಸುಬ್ರಮಣಿಯನ್ ಸ್ವಾಮಿ ಅವರು ಮಾ.9ರಂದು ಕೋರ್ಟ್ಗೆ ಹಾಜರಾಗಲಿದ್ದು ತಮ್ಮ ಹೇಳಿಕೆ ಮಂಡಿಸಲಿದ್ದಾರೆ.
ಪ್ರತಿವಾದ ಮುಕ್ತಾಯಗೊಳಿಸಿದ ಸಿಂಗ್ ಅವರು, 200 ಪುಟಗಳ ಲಿಖಿತ ಮತ್ತು ವಿವಿಧ ತೀರ್ಪುಗಳ ಸುಮಾರು 400 ಪುಟಗಳ ವಿವರವನ್ನು ನ್ಯಾಯಪೀಠಕ್ಕೆ ಒಪ್ಪಿಸಿದರು. ಜಯಲಲಿತಾ, ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಪಾದಿತರಾಗಿದ್ದಾರೆ. ಈ ಪ್ರಕರಣದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರಿದ್ದ ಏಕಸದಸ್ಯ ವಿಶೇಷ ಪೀಠವು ಜನವರಿ 5ರಿಂದ ವಿಚಾರಣೆ ನಡೆಸುತ್ತಿದೆ. ಶುಕ್ರವಾರ 38ನೇ ದಿನದ ವಿಚಾರಣೆ ಮುಕ್ತಾಯಗೊಂಡಿತು.