ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕಲಹ: ಹೊಸ ಯಕ್ಷಪ್ರಯೋಗ

Last Updated 17 ಜೂನ್ 2015, 19:30 IST
ಅಕ್ಷರ ಗಾತ್ರ

ಪೌರಾಣಿಕ ಪ್ರಸಂಗಗಳನ್ನು ರಂಗದ ಮೇಲೆ ತಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಕ್ಷಗಾನ ಕಲಾಪ್ರಕಾರ ಬಹು ಸಮರ್ಥವೆನಿಸಿದೆ. ಕರಾವಳಿ ತೀರದ ಹಿರಿಯರಿಂದ ಹಿಡಿದು ಕಿರಿಯರ ತನಕ ರಾಮಾಯಣ ಮಹಾಭಾರತ ಪುರಾಣಗಳನ್ನು ಲೀಲಾಜಾಲವಾಗಿ ಜನರು ಮಾತಾಡಿಕೊಳ್ಳುವಂತೆ ಮಾಡಿರುವುದು ಯಕ್ಷಗಾನ. ಆದರೆ ಅಷ್ಟಕ್ಕೇ ಸೀಮಿತಗೊಳ್ಳದೆ ಐತಿಹಾಸಿಕ ಘಟನೆಗಳು ಕಾಲ್ಪನಿಕ ಕಥೆಗಳು, ಜಾನಪದೀಯ ಪದಗಳೂ ಹಾಗೂ ಅತಿ ನವ್ಯ ಸಾಮಾಜಿಕ ವಿಷಯಗಳನ್ನು ಇಟ್ಟುಕೊಂಡು ಯಕ್ಷಗಾನ ಪ್ರಸಂಗ ರೂಪ ತಳೆದಿದೆ.

ಇಂತಹದೇ ಇನ್ನೊಂದು ಯಕ್ಷಗಾನ ಪ್ರಯೋಗಕ್ಕೆ ರಾಧಾಕೃಷ್ಣ ಉರಾಳ್ ಸಿದ್ಧತೆ ನಡೆಸಿದ್ದು, ಇದೇ ಭಾನುವಾರ (ಜೂನ್ 21) ಸಂಜೆ 6ಕ್ಕೆ ಕೆ.ಎಸ್.ಆರ್.ಟಿ.ಸಿ. ಲೇಔಟ್ ಉತ್ತರಹಳ್ಳಿಯಲ್ಲಿ ಚಿಕ್ಕಲಸಂದ್ರದ ಸಿದ್ಧಿಗಣಪತಿ ದೇವಾಲಯ ಸಮಿತಿ ಆವರಣದಲ್ಲಿನ ಮನೋರಂಜನಿ ಸಭಾಂಗಣದಲ್ಲಿ ‘ಜಲಕಲಹ’ ನಡೆಯಲಿದೆ.

ಮೌಖಿಕವಾಗಿ ಬಂದ ಗಂಗೆ ಗೌರಿಯರ ಹಗರಣದ ಜಾನಪದೀಯ ಹಾಡುಗಳು ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದು ತುರುವೇಕೆರೆ ದೊಂಬಿದಾಸರ ಪದಗಳು ಈಗಾಗಲೇ ದಾಖಲಾಗಿವೆ. ಗಂಗೆ ಮತ್ತು ಗೌರಿಯರ ನಡುವಿನ ಮಾತಿನ ಮುನಿಸು ಪರಸ್ಪರ ಪ್ರತಿಷ್ಠೆಯ ಕಾರಣವಾಗಿ ಜಾತಿ, ಕಸುಬುಗಳ ತಿಕ್ಕಾಟದ ಮಾತಿನ ಮುನಿಸನ್ನು ಮೀರಿ, ಕೈ ಕೈ ಮಿಲಾಯಿಸಿ ಕಾದಾಟಕ್ಕೆ ಬಂದಾಗ ಗೌರಿ ಸೂತಕವಾಗುತ್ತಾಳೆ.

ಮಡಿ ಮೈಲಿಗೆಯನ್ನು ಕಳೆಯಲು ನೀರು ಸಿಗದೆ ಪರದಾಡುತ್ತಾಳೆ. ಗಂಗೆ ಆಕೆಗೆ ನೀರು ಸಿಗದಂತೆ ಮಾಡುತ್ತಾಳೆ. ನೀರಿಲ್ಲದೆ ಜಗವಿಲ್ಲ, ಅದರ ಪ್ರಾಮುಖ್ಯವನ್ನು ಅರಿತು ಕಾಪಿಟ್ಟುಕೊಳ್ಳುವುದು ಮುಖ್ಯ. ಹಣ ಕೊಟ್ಟರೂ, ಯಾವುದೇ ವಶೀಲಿ ಮಾಡಿದರೂ ಸಿಗದಂತ ಜಲಸಂಪತ್ತಿನ ಕುರಿತಾಗಿ ಅಸಡ್ಡೆ ಮಾಡಿದರೆ ಆಗುವ ದೀನ ಸ್ಥಿತಿ ಇಲ್ಲಿ ಅನಾವರಣಗೊಳ್ಳಲಿದೆ. ನೀರಿಗಿಂತ ಹೆಚ್ಚಾಗಿ ವೈಯಕ್ತಿಕ ಪ್ರತಿಷ್ಠೆಯನ್ನೇ ಇರಿಸಿಕೊಂಡು  ಕಾಲ್ಕೆರೆಯುತ್ತಿರುವ ನಂಜು ಮನಸುಗಳಿಗೆ ಚುಚ್ಚುವಂತಹ ಕಥಾಸಾರ ‘ಜಲಕಲಹ’ ಪ್ರಯೋಗದಲ್ಲಿದೆ.

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗ ಹಾಗೂ ಸಮಗ್ರ ಆರೋಗ್ಯ ಚಿಂತನೆ ಕುರಿತಾಗಿ ವೈ.ವಿ. ಗುಂಡೂರಾವ್, ಯೋಗಗುರು ರಂಗರಾಜು ಅವರಿಂದ ಉಪನ್ಯಾಸವಿದೆ. ‘ಜಲಕಲಹ’ ಪ್ರಯೋಗವನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ಸಿದ್ಧಗೊಳಿಸಲಾಗಿದೆ.  ಪ್ರದರ್ಶನಕ್ಕೆ ಕಲಾಕದಂಬ, ಸಿದ್ಧಿಗಣಪತಿ ದೇವಾಲಯ ಸಮಿತಿ, ಸೋಹಂ ಕ್ರಿಯಾಯೋಗ ಸಹಕಾರ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT