ರಾಯಚೂರು: ಜಿಲ್ಲಾ ಕೇಂದ್ರಕ್ಕೆ ಈ ಗ್ರಾಮ ಕೇವಲ 17 ಕಿ.ಮೀ ದೂರ. ಒಂದು ಕಡೆ ರಾಯಚೂರು ಇನ್ನೊಂದು ಕಡೆ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಇರುವ ಶಕ್ತಿನಗರ. ರಾಯಚೂರು– ಹೈದರಾಬಾದ್– ಎಸ್ಎಚ್ 63 ರಸ್ತೆ ಪಕ್ಕ ಇರುವ ಈ ಪುಟ್ಟ ಗ್ರಾಮದ ಜನರಿಗೆ ಮೂಲಸೌಕರ್ಯ ಸಮಸ್ಯೆ. ಮಳೆ ಬಂದರೆ ನಡುಕ, ನಿದ್ದೆ ಇಲ್ಲ. ನಿತ್ಯ ಪ್ರಾಣಭಯ.
ಗ್ರಾಮದ ಪಕ್ಕದಲ್ಲಿಯೇ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 8 ಘಟಕಗಳು ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯಕ್ಕೆ ಪೂರೈಸುತ್ತವೆ. ಆದರೆ, ಈ ಗ್ರಾಮಕ್ಕೆ ಸದಾ ವಿದ್ಯುತ್ ಸಮಸ್ಯೆ. ಧಾರಾಕಾರ ಮಳೆ ಸುರಿದು ಊರಿಗೆ ಊರೇ ಜಲಾವೃತಗೊಂಡು ಜನ ದಿಕ್ಕಾಪಾಲಾಗಿ ರಕ್ಷಣೆ ಬಾಯ್ಬಿಡುವಾಗಲೇ ವಿದ್ಯುತ್ ಇರಲಿಲ್ಲ. ಶಾಲೆ, ರಸ್ತೆ ಬದಿ ಎತ್ತರ ಪ್ರದೇಶದ ಮನೆಗಳಿಗೆ ನುಗ್ಗಿ ರಕ್ಷಣೆ ಪಡೆದು ಪ್ರಾಣ ಉಳಿಸಿಕೊಂಡಿದ್ದಾರೆ.
ಇದು ಒಂದು ದಿನ, ಒಂದು ವರ್ಷದ ಕಥೆಯಲ್ಲ. ಪ್ರತಿ ವರ್ಷ, ವರ್ಷದುದ್ದಕ್ಕೂ ಈ ಗ್ರಾಮದ ಜನತೆಯ ಪಡಿಪಾಟಲು ಇದೇ ಆಗಿದೆ.
ಇದು ರಾಯಚೂರು ತಾಲ್ಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಜನತೆ ಅಸಹಾಯಕ ಬದುಕಿನ ಚಿತ್ರಣವಿದು. ಪ್ರತಿ ವರ್ಷ ಮಳೆ ಬಂದಾಗಲೂ ಜನ ರಕ್ಷಣೆಗಾಗಿ ಮೊರೆ ಇಡುತ್ತಾರೆ. ಕಾರಣ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ‘ಕೋಣದಹಳ್ಳ’. ಮಳೆ ಬಂದಾಗ ಹಳ್ಳ ಉಕ್ಕಿ ಹರಿಯುತ್ತದೆ. ಪಕ್ಕದ ಗ್ರಾಮಕ್ಕೂ ನುಗ್ಗಿ ಜಲಾವೃತಗೊಳಿಸುತ್ತದೆ. ಮಳೆ ನಿಂತು ಈ ನೀರು ಕ್ರಮೇಣ ಕಡಿಮೆ ಆಗಲು ಕನಿಷ್ಠ 15 ದಿನ ಬೇಕು ಎನ್ನುತ್ತಾರೆ ಗ್ರಾಮಸ್ಥರು.
‘ಶೀಘ್ರ ಮೂಲಸೌಕರ್ಯ’ ‘ಮೂಲಸೌಕರ್ಯ ಇಲ್ಲದೆ ವಸತಿ’ |
ಕೇವಲ ಹೆಗ್ಗಸನಹಳ್ಳಿ ಗ್ರಾಮಕ್ಕಷ್ಟೇ ಅಲ್ಲ. ಮೇಲ್ಭಾಗದ ಚಿಕ್ಕಸುಗೂರು ಗ್ರಾಮಕ್ಕೂ ಈ ಹಳ್ಳದ ಉಪದ್ರವ ಇದೆ. ಆ ಗ್ರಾಮದೊಳಗೂ ನುಗ್ಗಿ ಅಲ್ಲಿಯೂ ಒಂದಿಷ್ಟು ಮನೆಗಳನ್ನು ನೀರಲ್ಲಿ ಮುಳುಗಿಸುತ್ತದೆ.
ಹೆಗ್ಗಸನಹಳ್ಳಿ ಮತ್ತು ಚಿಕ್ಕಸುಗೂರು ಈ ಎರಡೂ ಗ್ರಾಮದವರೂ ಈ ಹಳ್ಳದ ನೀರು ಗ್ರಾಮದೊಳಗೆ ನುಗ್ಗದಂತೆ ತಡೆಯಲು ಹಳ್ಳಕ್ಕೆ ಹೊಂದಿಕೊಂಡಂತೆ ತಡೆಗೋಡೆ ನಿರ್ಮಾಣ ಮಾಡಿದರೆ ಉಪಕಾರವಾಗುತ್ತದೆ ಎಂದು ಬೇಡಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಕಣ್ತೆರೆದಿಲ್ಲ.
2013 ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿ ಜನ ತೊಂದರೆಗೀಡಾದಾಗ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಹವಾಲು ಆಲಿಸಿದ್ದರು. ಆಗಲೂ ಗ್ರಾಮಸ್ಥರು ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದರು. ಕೇಶಮ್ಮ ಎಂಬ ವೃದ್ದೆ ವಾಸಿಸುವ ಶೆಡ್ಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಒಂದು ವರ್ಷ ಕಳೆದಿದೆ. ತಡೆಗೋಡೆ ನಿರ್ಮಾಣ ಆಗಿಲ್ಲ. ಕೇಶಮ್ಮ ವಾಸಿಸುವ ಟಿನ್ ಶೆಡ್ ಇನ್ನೂ ಹಾಗೆಯೇ ಇದೆ. ಈ ವರ್ಷ ಆಗಸ್ಟ್ 23ರ ರಾತ್ರಿ ಗ್ರಾಮಕ್ಕೆ ಮತ್ತೆ ಹಳ್ಳದ ನೀರು ನುಗ್ಗಿ ಜನರನ್ನು ಬೀದಿಪಾಲು ಮಾಡಿದೆ. ಶಾಲೆ, ದೇವಸ್ಥಾನ, ಎತ್ತರ ಪ್ರದೇಶದ ಮನೆಗಳಲ್ಲಿ ಜನ ರಕ್ಷಣೆ ಪಡೆದಿದ್ದರು. ಈಗಲೂ ಭಯದಲ್ಲಿಯೇ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.