ಆಲಮಟ್ಟಿ ಜಲಾಶಯದಲ್ಲಿ ನೀರಿನ ಕೊರತೆ ಕಂಡುಬಂದಿರುವ ಸುದ್ದಿ ಕೇಳಿದಾಗ ‘ಧರೆ ಹೊತ್ತಿ ಉರಿದೊಡೆ...’ ಎಂಬ 12ನೇ ಶತಮಾನದ ಶರಣರ ನುಡಿ ನೆನಪಾಯಿತು.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಜಲಾಶಯದ ಒಡಲೇ ಬರಿದಾಗಿದೆ ಎಂದರೆ ಬರದ ಭೀಕರತೆಯ ಅರಿವಾಗುತ್ತದೆ. ಇನ್ನುಳಿದಿರುವ ನೀರನ್ನು ಸಹ ದಿನಕರ ತನ್ನ ಪ್ರಖರತೆಯಿಂದ ಕದಿಯುವುದರಲ್ಲಿ ಅನುಮಾನ ಇಲ್ಲ.
ಮೊದಲ ಮಳೆ ಇಳೆಗೆ ಮುತ್ತಿಕ್ಕುವವರೆಗೆ ಬೇಸಿಗೆ ಕಳೆಯುವುದು ನಿಜಕ್ಕೂ ಸವಾಲಿನ ಕಾಯಕ. ಮಳೆರಾಯ ಸ್ವಲ್ಪ ಕರುಣೆ ತೋರಿ ಅವಧಿ ಆರಂಭಕ್ಕೂ ಮೊದಲೇ ಬಂದರೆ ಪಶು ಪಕ್ಷಿ, ಮನುಷ್ಯರಿಗೆ ಜೀವಜಲ ಸಿಕ್ಕೀತು. ಏನೇ ಆಗಲಿ ಪ್ರಕೃತಿ ಮಾತೆ ನೀಡಿದ ಬರದ ಪಾಠದಿಂದ ಭವಿಷ್ಯದಲ್ಲಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.