ಅಂತರ್ಜಾತಿ ವಿವಾಹಕ್ಕೆ ಅವಕಾಶ ನೀಡುವ ಐತಿಹಾಸಿಕ ನಿರ್ಧಾರವನ್ನು ಹರಿಯಾಣದ ನಾರ್ನಿಡ್ ಗ್ರಾಮದ ಸತ್ರೋಲ್ ಖಾಪ್ ಪಂಚಾಯಿತಿ ಕಳೆದ ವಾರವಷ್ಟೇ ತೆಗೆದುಕೊಂಡಿದೆ. ಹರಿಯಾಣದಲ್ಲಿ ಕುಸಿಯುತ್ತಿರುವ ಹೆಣ್ಣುಮಕ್ಕಳ ಸಂಖ್ಯೆಯಿಂದಾಗಿ ಉಂಟಾಗಿರುವ ಸಾಮಾಜಿಕ ತಳಮಳ ಇದಕ್ಕೆ ಕಾರಣ.
ಇಂತಹದೊಂದು ಬೆಳವಣಿಗೆ ನಡೆದಿರುವ ವೇಳೆಯಲ್ಲೇ ನಮ್ಮದೇ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹ ಮಾಡಿಕೊಂಡ ತಪ್ಪಿಗಾಗಿ ಹೆಣ್ಣುಮಗಳೊಬ್ಬಳನ್ನು ಜೀವಂತವಾಗಿ ದಹಿಸಿರುವುದು ನಾಗರಿಕ ಸಮಾಜಕ್ಕೆ ಎಸಗಿದ ಕಳಂಕ. ನಾಯಕ ಜನಾಂಗಕ್ಕೆ ಸೇರಿದ ಶಿಲ್ಪಾ ನಾಯಕ್ ಳ ಜೊತೆ ವಿವಾಹಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಅಭಿಜಿತ್ ಕುಟುಂಬದವರ ವಿರೋಧ ಇತ್ತು ಎನ್ನಲಾಗಿದೆ. ಈ ವಿರೋಧ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕನ್ನಹಳ್ಳಿ ಬಳಿ ಶಿಲ್ಪಾಳ ಬರ್ಬರ ಹತ್ಯೆಯಲ್ಲಿ ಕೊನೆಗೊಂಡಿರುವುದು ವಿಷಾದನೀಯ. ಹಿತೈಷಿಗಳಂತೆ ನಾಟಕವಾಡಿ ಗಂಡನ ಬಂಧುಗಳೇ ಕೊಲೆ ಮಾಡಿರುವುದಂತೂ ತಣ್ಣನೆಯ ಕ್ರೌರ್ಯಕ್ಕೆ ಉದಾಹರಣೆ. ಜಾತಿ ಅಸಹನೆಯ ವಿಷದ ಪರಾಕಾಷ್ಠೆ ಇದು.
ಮಂಡ್ಯ ಜಿಲ್ಲೆಯಲ್ಲಿ ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಮದ್ದೂರು ತಾಲ್ಲೂಕಿನ ಅಂಬಲಪಾಡಿಯಲ್ಲಿ ದಲಿತ ಯುವಕನನ್ನು ಪ್ರೀತಿಸಿದ ಯುವತಿಯನ್ನು ಆಕೆಯ ತಂದೆ ಹಾಗೂ ಬಂಧುಗಳು ನೇಣುಹಾಕಿ ಕೊಂದ ಆರೋಪದ ವಿಚಾರವೂ ದೊಡ್ಡ ಸುದ್ದಿಯಾಗಿತ್ತು. ಸಕ್ಕರೆಯ ಕಣಜವೆನಿಸಿದ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಗಳ ಹತ್ಯೆ ಪ್ರಮಾಣ ಹೆಚ್ಚಿದೆ ಎಂಬ ಕಳಂಕ ಈಗಾಗಲೇ ಇದೆ. ಈಗ ಅಂತರ್ಜಾತಿ ವಿವಾಹಗಳ ಬಗ್ಗೆ ಈ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿರುವ ಅಸಹನೆ ಗಂಭೀರವಾದದ್ದು.
ರಾಷ್ಟ್ರ ಸ್ವತಂತ್ರವಾಗಿ ಆರು ದಶಕಗಳು ಕಳೆದರೂ ಜಾತಿ ತಾರತಮ್ಯಗಳು ಅಳಿಯಲಿಲ್ಲ. ಬದಲಿಗೆ ಆಧುನಿಕ ನಾಗರಿಕ ಸಮಾಜಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಿಸುವಂತಹ ಮನಸ್ಸುಗಳು ನಿರ್ಮಾಣವಾಗುತ್ತಿರುವುದು ವಿಪರ್ಯಾಸ. ನಾಗರಿಕ ಸಮಾಜಕ್ಕೆ ಅಡ್ಡಗಾಲಾಗುವ ಇಂತಹ ಪ್ರವೃತ್ತಿಗಳ ಬೆಳವಣಿಗೆಯನ್ನು ಆರಂಭದಲ್ಲೇ ನಿಯಂತ್ರಿಸುವುದು ಆಡಳಿತ ಯಂತ್ರದ ಜವಾಬ್ದಾರಿ. ಶಿಲ್ಪಾ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಪರಾಧವನ್ನು ಸಹಿಸಲಾಗದು ಎಂಬಂತಹ ಸಂದೇಶ ಸಮಾಜಕ್ಕೆ ರವಾನೆಯಾಗಬೇಕು.
ಆಧುನಿಕ ಸಮಾಜದಲ್ಲಿ ತಲೆ ಎತ್ತುತ್ತಿರುವ ಇಂತಹ ಪಿಡುಗುಗಳ ಕುರಿತು ಸಮಾಜಶಾಸ್ತ್ರೀಯ ಅಧ್ಯಯನಗಳು ನಡೆಯಬೇಕು. ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಪ್ರಬಲವಾಗಿರುವ ಜಾತಿ ಪಂಚಾಯಿತಿಗಳು ಸೃಷ್ಟಿಸಿದ ಅವಾಂತರಗಳ ಕೆಡುಕುಗಳನ್ನು ನಾವು ಮನಗಾಣಬೇಕು. ಹೀಗಾಗಿ ಜಾತಿಭೇದದ ಪಿಡುಗು ಸೇರಿದಂತೆ ಎಲ್ಲಾ ಸಾಮಾಜಿಕ ಪಿಡುಗುಗಳ ವಿರುದ್ಧವೂ ಗ್ರಾಮ ಮಟ್ಟಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.